ಲಖನೌ: ಅಯೋಧ್ಯೆಯ ರಾಮ ಮಂದಿರ–ಬಾಬರಿ ಮಸೀದಿ ವಿವಾದವನ್ನು ನ್ಯಾಯಾಲಯದ ಹೊರಗಡೆ ಮಾತುಕತೆ ಮೂಲಕ ಪರಿಹರಿಸುವ ನಿಟ್ಟಿನಲ್ಲಿ ಸಂಧಾನಕ್ಕೆ ಯತ್ನಿಸುತ್ತಿರುವ ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕ ಶ್ರೀ ಶ್ರೀ ರವಿಶಂಕರ್ ಅವರು ಗುರುವಾರ ಅಯೋಧ್ಯೆಗೆ ಭೇಟಿ ನೀಡಿದರು.
ಆದರೆ, ಅವರನ್ನು ಭೇಟಿಯಾಗಲು ವಿವಾದಕ್ಕೆ ಸಂಬಂಧಪಟ್ಟವರು ಹೆಚ್ಚು ಉತ್ಸಾಹ ತೋರಲಿಲ್ಲ. ಬಹುತೇಕರು ಮಾತುಕತೆ ಪ್ರಕ್ರಿಯೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಮಾತುಕತೆ ಮೂಲಕ ವಿವಾದ ಬಗೆಹರಿಸಲು ರವಿಶಂಕರ್ ಮಾಡುತ್ತಿರುವ ಯತ್ನವನ್ನು ‘ರಾಜಕೀಯ ನಾಟಕ’ ಎಂದು ಮುಸ್ಲಿಂ ಅರ್ಜಿದಾರರು ಕರೆದಿದ್ದಾರೆ.
ರವಿಶಂಕರ್ ಅವರು ರಾಮ ಜನ್ಮಭೂಮಿ ಟ್ರಸ್ಟ್ ಅಧ್ಯಕ್ಷ ಮಹಂತ ನೃತ್ಯನ್ ಗೋಪಾಲ್ ದಾಸ್ ಅವರನ್ನು ಭೇಟಿ ಮಾಡಿ ಈ ವಿಚಾರವಾಗಿ ಮಾತುಕತೆ ನಡೆಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾತುಕತೆ ಮೂಲಕ ಇದನ್ನು ಬಗೆಹರಿಸುವುದು ಕಷ್ಟ ಎಂದು ಒಪ್ಪಿಕೊಂಡಿದ್ದಾರೆ.
‘ಇದು ಅತ್ಯಂತ ಸಂಕೀರ್ಣ ವಿಚಾರ... ನನ್ನ ಬಳಿ ಯಾವುದೇ ರಾಜಿ ಸೂತ್ರವಿಲ್ಲ... ಸಂಬಂಧಿಸಿದವರೊಂದಿಗೆ ಮಾತನಾಡಿ ರಾಜಿ ಮಾತುಕತೆಯ ಬಗ್ಗೆ ಅವರ ಅಭಿಪ್ರಾಯ ತಿಳಿಯಲು ನಾನು ಬಯಸುತ್ತೇನೆ’ ಎಂದು ರವಿಶಂಕರ್ ಹೇಳಿದ್ದಾರೆ.