ಕಲಬುರ್ಗಿ: ಟಿಪ್ಪು ಜಯಂತಿ ಆಚರಣೆ ಸಂದರ್ಭದಲ್ಲಿ ಟಿ.ವಿ. ವಾಹಿನಿಯೊಂದರ ಚರ್ಚೆಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಕುರಿತು ಹಗುರವಾಗಿ ಮಾತನಾಡಿರುವ ವಿಧಾನ ಪರಿಷತ್ ಸದಸ್ಯ ಗೋ ಮಧುಸೂಧನ್ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ದಲಿತ ಜನಜಾಗೃತಿ ವೇದಿಕೆ ಪದಾಧಿಕಾರಿಗಳು ಜಿಲ್ಲಾಧಿಕಾರಿ ಅವರ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಗುರುವಾರ ಮನವಿ ಸಲ್ಲಿಸಿದರು.
‘ದೇಶದ ಸಂವಿಧಾನ ರೂಪಿಸಿರುವ ಅಂಬೇಡ್ಕರ್ ಅವರ ಸಂವಿಧಾನ ನಾನು ಒಪ್ಪುವುದಿಲ್ಲ ಎಂದು ಸಾರ್ವಜನಿಕವಾಗಿ ಹೇಳಿದ್ದಾರೆ. ಇದರಿಂದ ದೇಶದ ಏಕತೆಗೆ ಧಕ್ಕೆಯಾಗಿದ್ದು, ಬಿಜೆಪಿ ವರಿಷ್ಠರು ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು. ಅವರ ಸದಸ್ಯತ್ವವನ್ನು ಅನರ್ಹಗೊಳಿಸಬೇಕು’ ಎಂದು ಒತ್ತಾಯಿಸಿದರು.
ವೇದಿಕೆ ರಾಜ್ಯ ಘಟಕದ ಅಧ್ಯಕ್ಷ ರಾಜಕುಮಾರ ಹುಗ್ಗಿ, ಜಿಲ್ಲಾ ಘಟಕದ ಅಧ್ಯಕ್ಷ ಶಾಂತಕುಮಾರ ಎಂ.ಕಟ್ಟಿಮನಿ, ಉಪಾಧ್ಯಕ್ಷ ಶಿವಾ ಎಸ್.ಬೇಲೂರ, ಖಜಾಂಚಿ ಶೈಲೇದ್ರ ದಂಡೆ, ಮುಖಂಡರಾದ ಶಿವಶರಣಪ್ಪ ರಾತ್ರಿಕರ್, ರಾಜು ದೊಡ್ಡಮನಿ, ಮಹೇಶ ಕಟವಟಿ, ದಿಗಂಬರ ಬಬಲಾದ ಇದ್ದರು.