ಧಾರವಾಡ: ‘ಭಾಷೆಯನ್ನು ಶ್ರೀಮಂತಗೊಳಿಸುವಲ್ಲಿ ಪತ್ರಿಕೆಗಳು ಪ್ರಮುಖ ಪಾತ್ರವಹಿಸುತ್ತಿವೆ’ ಎಂದು ಪಿ.ಸಿ. ಜಾಬಿನ್ ವಿಜ್ಞಾನ ಮಹಾವಿದ್ಯಾಲಯದ ಗ್ರಂಥಪಾಲಕ ಬಿ.ಎಸ್.ಮಾಳವಾಡ ಅಭಿಪ್ರಾಯಪಟ್ಟರು.
ಇಲ್ಲಿನ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಪ್ರೊ.ಶಿ.ಶಿ.ಬಸವನಾಳ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ’ಭಾಷೆ ಬೆಳೆಯಬೇಕು ಎಂದಾದರೆ ಅದು ಅನ್ನದ ಭಾಷೆಯಾಗಬೇಕು. ಕೇವಲ ಭಾವನಾತ್ಮಕ ಪ್ರೀತಿಯಿಂದ ಯಾವುದೇ ಭಾಷೆ ಬೆಳೆಯುವುದಿಲ್ಲ. ನಾಡಿನ ಜನತೆಯನ್ನು ಭಾವನಾತ್ಮಕವಾಗಿ ಬೆಸೆಯುವ ಮಾಧ್ಯಮವಾಗಿ ಭಾಷೆ ಕೆಲಸ ಮಾಡುತ್ತವೆ’ ಎಂದರು.
‘ನಾಡಿನ ಹಲವು ಲೇಖಕರು, ಸಾಹಿತಿಗಳು ತಮ್ಮ ಸಾಹಿತ್ಯ ಕೃಷಿಯ ಮೂಲಕ ಭಾಷೆಯನ್ನು ಶ್ರೀಮಂತಗೊಳಿಸಿದ್ದಾರೆ. ಡಾ.ದ.ರಾ.ಬೇಂದ್ರೆ, ಶಿಮರಾಮ ಕಾರಂತ, ಡಾ.ಯು.ಆರ್.ಅನಂತಮೂರ್ತಿ ಸೇರಿದಂತೆ ಹಲವರು ವಿವಿಧ ಕಾಲಘಟ್ಟಗಳಲ್ಲಿ ಭಾಷೆಯನ್ನು ಸಶಕ್ತವಾಗಿ ದುಡಿಸಿಕೊಂಡು, ಸಾಹಿತ್ಯ ರಚಿಸಿ ಕನ್ನಡದ ಹಿರಿಮೆ ಹೆಚ್ಚಿಸಿದ್ದಾರೆ’ ಎಂದು ಅವರು ಹೇಳಿದರು.
‘ಕನ್ನಡವು ಶಿಕ್ಷಣ ಮತ್ತು ಆಡಳಿತದ ಭಾಷೆಯಾಗಬೇಕು. ಕನ್ನಡದ ಮಹತ್ವದ ಕೃತಿಗಳು ಬೇರೆ ಭಾಷೆಗಳಿಗೆ ಅನುವಾದವಾಗಬೇಕು, ವಿಜ್ಞಾನ ಮತ್ತು ತಂತ್ರಜ್ಞಾನದ ಕೃತಿಗಳು ಕನ್ನಡದಲ್ಲಿ ಬರಬೇಕು, ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಉದ್ಯೋಗವಕಾಶಗಳು ದೊರೆಯಬೇಕು. ರಾಜ್ಯದಲ್ಲಿ 2800ಕ್ಕೂ ಹೆಚ್ಚು ಕನ್ನಡಶಾಲೆಗಳು ಮುಚ್ಚುವ ಸ್ಥಿತಿಯಲ್ಲಿವೆ. ಇದಕ್ಕೆ ಪಾಲಕರಲ್ಲಿ ಹೆಚ್ಚುತ್ತಿರುವ ಆಂಗ್ಲ ಭಾಷೆಯ ವ್ಯಾಮೋಹವೂ ಕಾರಣವಾಗಿದೆ’ ಎಂದು ಹೇಳಿದರು.
ಪ್ರಾಧ್ಯಾಪಕ ಡಾ. ಧನವಂತ ಹಾಜವಗೋಳ, ಡಾ.ಡಿ.ಎಂ. ಹಿರೇಮಠ, ಶಿವಣ್ಣ ಬೆಲ್ಲದ, ದತ್ತಿ ದಾನಿ ರವೀಂದ್ರ ಬಸವನಾಳ, ಮೃತ್ಯುಂಜಯ ಶೆಟ್ಟರ, ಸತೀಶ ತುರಮುರಿ, ಕೃಷ್ಣ ಜೋಶಿ, ಜಿ.ಬಿ. ಹೊಂಬಳ ಇದ್ದರು.