ನವದೆಹಲಿ: ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಬಣವೇ ನಿಜವಾದ ಜೆಡಿಯು ಮತ್ತು ಬಾಣದ ಗುರುತನ್ನು ಅವರು ಪಕ್ಷದ ಚಿಹ್ನೆಯಾಗಿ ಬಳಸಬಹುದು ಎಂದು ಚುನಾವಣಾ ಆಯೋಗ ಶುಕ್ರವಾರ ಹೇಳಿದೆ. ಇದು ಜೆಡಿಯು ಬಂಡಾಯ ನಾಯಕ ಶರದ್ ಯಾದವ್ ಅವರಿಗೆ ತೀವ್ರ ಹಿನ್ನಡೆ ತಂದಿದೆ.
ನಿತೀಶ್ ನೇತೃತ್ವದ ಬಣಕ್ಕೆ ಹೆಚ್ಚಿನ ಸಂಖ್ಯೆಯ ಶಾಸಕರ ಹಾಗೆಯೇ ಪಕ್ಷದ ರಾಷ್ಟ್ರೀಯ ಸಮಿತಿಯ ಸದಸ್ಯರ ಬೆಂಬಲ ಇದೆ. ಈ ಬಣವು ಬಿಹಾರದ ಅಧಿಕೃತ ಪ್ರಾದೇಶಿಕ ಪಕ್ಷ ಎಂದು ಆಯೋಗ ಆದೇಶದಲ್ಲಿ ತಿಳಿಸಿದೆ.
ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು, ಆರ್ಜೆಡಿ ಮತ್ತು ಕಾಂಗ್ರೆಸ್ನೊಂದಿಗಿನ ಮೈತ್ರಿಗೆ ಕೊನೆ ಹಾಡಿ ಬಿಜೆಪಿಯೊಂದಿಗೆ ಕೈಜೋಡಿಸಿದ್ದರು. ಪಕ್ಷದ ರಾಷ್ಟ್ರೀಯ ಸಮಿತಿಯ ತೀರ್ಮಾನಕ್ಕೆ ವಿರುದ್ಧವಾಗಿ ನಿತೀಶ್ ನಡೆದುಕೊಂಡಿದ್ದಾರೆ ಎಂದು ಪಕ್ಷದ ಹಿರಿಯ ನಾಯಕ ಶದರ್ ಯಾದವ್ ಆರೋಪಿಸಿದ್ದರು.
ತಮ್ಮ ನೇತೃತ್ವದ ಜೆಡಿಯು ನಿಜವಾದ ಜೆಡಿಯು ಎಂದು ಅವರು ವಾದಿಸಿದ್ದರು. ಪಕ್ಷದ ಹಕ್ಕು ಮತ್ತು ಚಿಹ್ನೆಗಾಗಿ ಯಾದವ್ ಬಣದ ಅಧ್ಯಕ್ಷ ಚೊಟುಬಾಯ್ ಅಮರಸಂಗ್ ವಾಸವ್ ಅವರು ಆಯೋಗಕ್ಕೆ ದೂರು ನೀಡಿದ್ದರು.