ಮುಳಬಾಗಿಲು: ನಗರದಲ್ಲಿ ನಿರ್ಮಾಣ ಮಾಡಿರುವ ರಸ್ತೆಗಳ ಕಾಮಗಾರಿ ಕಳಪೆಯಾಗಿದೆ ಎಂದು ಆರೋಪಿಸಿ ಒತ್ತಾಯಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಕಾರ್ಯಕರ್ತರು ಇಲ್ಲಿನ ಕೆಇಬಿ ವೃತ್ತದಲ್ಲಿ ಗುರುವಾರ ಧರಣಿ ನಡೆಸಿದರು.
ಅಧಿಕಾರಿಗಳು ರಸ್ತೆಗಳ ಕಾಮಗಾರಿಯ ಗುಣಮಟ್ಟ ಪರಿಶೀಲಿಸದೆ ಗುತ್ತಿಗೆದಾರರಿಗೆ ಬಿಲ್ ಪಾವತಿಸಿದ್ದಾರೆ. ರಸ್ತೆ ನಿರ್ಮಾಣಕ್ಕೆ ಬಿಡುಗಡೆಯಾಗಿದ್ದ ಅನುದಾನವನ್ನು ಅಧಿಕಾರಿಗಳು ಗುತ್ತಿಗೆದಾರರ ಜತೆ ಶಾಮೀಲಾಗಿ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಸಂಘಟನೆಯ ರಾಜ್ಯ ಘಟಕದ ಉಪಾಧ್ಯಕ್ಷ ಕೆ.ನಾರಾಯಣಗೌಡ ದೂರಿದರು.
ರಸ್ತೆಗಳು ನಿರ್ಮಾಣವಾದ ಕೆಲ ತಿಂಗಳಲ್ಲೇ ಹಾಳಾಗಿವೆ. ಇದಕ್ಕೆ ಕಾಮಗಾರಿ ಕಳಪೆಯಾಗಿರುವುದೇ ಕಾರಣ. ಗುತ್ತಿಗೆದಾರರು ಹಲವೆಡೆ ರಸ್ತೆ ನಿರ್ಮಾಣ ಮಾಡದಿದ್ದರೂ ಅಧಿಕಾರಿಗಳು ಬಿಲ್ ಮಂಜೂರು ಮಾಡಿದ್ದಾರೆ. ಅಲ್ಲದೇ, ನಕಲಿ ದಾಖಲೆಪತ್ರ ಸೃಷ್ಟಿಸಿ ಬಿಲ್ ಪಡೆದಿದ್ದಾರೆ ಎಂದು ಆರೋಪಿಸಿದರು.
ರಸ್ತೆ ಕಾಮಗಾರಿಯಲ್ಲಿ ಕಮಿಷನ್ ದಂಧೆ ಹಾವಳಿ ಹೆಚ್ಚಿದೆ. ಅಧಿಕಾರಿಗಳು ಸರ್ಕಾರದ ನಿಯಮಗಳನ್ನು ಉಲ್ಲಂಘಿಸಿ ತಮ್ಮ ಆಪ್ತರಿಗೆ ರಸ್ತೆ ಕಾಮಗಾರಿಯ ಗುತ್ತಿಗೆ ನೀಡುತ್ತಿದ್ದಾರೆ. ಟೆಂಡರ್ ಹಾಗೂ ಕಾಮಗಾರಿಯಲ್ಲಿ ಸಾಕಷ್ಟು ಅಕ್ರಮ ನಡೆದಿದೆ ಎಂದು ಸಂಘಟನೆಯ ತಾಲ್ಲೂಕು ಘಟಕದ ಅಧ್ಯಕ್ಷ ಫಾರೂಕ್ ಪಾಷಾ ಹೇಳಿದರು.
ಕಳಪೆ ಕಾಮಗಾರಿಯ ಬಿಲ್ ತಡೆ ಹಿಡಿಯಬೇಕು. ಗುತ್ತಿಗೆದಾರರ ಜತೆ ಸೇರಿ ಅಕ್ರಮ ಎಸಗಿರುವ ಅಧಿಕಾರಿಗಳನ್ನು ಅಮಾನತು ಮಾಡಬೇಕು. ಗುತ್ತಿಗೆದಾರರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ಕಪ್ಪುಪಟ್ಟಿಗೆ ಸೇರಿಸಬೇಕು ಎಂದು ಧರಣಿನಿರತರು ಒತ್ತಾಯಿಸಿದರು.
ರೈತ ಸಂಘ ಜಿಲ್ಲಾ ಘಟಕದ ಅಧ್ಯಕ್ಷ ಶ್ರೀನಿವಾಸ್, ಸದಸ್ಯರಾದ ರಂಜಿತ್ಕುಮಾರ್, ಸುರೇಶ್, ವಿಜಯಪಾಲ್, ಪ್ರಭಾಕರ್, ಮಂಜುನಾಥ್, ಸತೀಶ್, ಭರತ್, ಶಿವ ಪಾಲ್ಗೊಂಡಿದ್ದರು.