ಮುದ್ದೇಬಿಹಾಳ: ಪಟ್ಟಣದಲ್ಲಿ ಬಿಡಾಡಿ ದನಗಳ ಹಾವಳಿ ತೀವ್ರವಾಗಿದೆ. ಕೂಡಲೇ ಅವುಗಳನ್ನು ಬೇರೆಡೆ ಸಾಗಿಸಬೇಕು ಎಂದು ಆಗ್ರಹಿಸಿ ನೂರಾರು ನಾಗರಿಕರು ಶನಿವಾರ ದನಗಳ ಸಮೇತ ಪುರಸಭೆಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.
ಪ್ರತಿ ಸಲ ಈ ಬೀದಿ ದನ ಕರುಗಳನ್ನು ನಿಯಂತ್ರಿಸಿ ಎಂದು ಮನವಿ ಕೊಡುತ್ತಿದ್ದರು. ಆದರೆ ಈ ಸಲ ಬೀದಿ ದನಗಳನ್ನೇ ಪುರಸಭೆಯ ದ್ವಾರ ಬಾಗಿಲಿಗೆ ಕಟ್ಟಿ ಯಾರೂ ಒಳಗೆ ಹೋಗದಂತೆ ಪ್ರತಿಭಟನೆ ನಡೆಸಿದರು.
ಪುರಸಭೆ ಸದಸ್ಯ ಹುಸೇನಬಾಷಾ (ಪಿಂಟು) ಸಾಲಿಮನಿ, ಬಿಡಾಡಿ ದನಗಳು ಎಲ್ಲೆಂದರಲ್ಲಿ ನುಗ್ಗಿ ದಾಂಧಲೆ ಮಾಡುತ್ತವೆ. ಜನರಿಗೆ ದಾರಿ ಬಿಡದೇ ರಸ್ತೆಯಲ್ಲಿಯೇ ಮಲಗಿ, ಓಡಾಡಿ ಬಹಳಷ್ಟು ತೊಂದರೆ ಮಾಡುತ್ತಿವೆ. ಇವುಗಳಿಂದ ಹಲವು ಜನ ಬಿದ್ದು ಗಾಯ ಮಾಡಿಕೊಂಡಿದ್ದಾರೆ. ಇವುಗಳನ್ನು ನಿಯಂತ್ರಿಸುವಂತೆ ಕೋರಿ ಸಾಕಷ್ಟು ಸಲ ಮನವಿ ಮಾಡಿದರೂ ಪುರಸಭೆ ಅಧಿಕಾರಿಗಳು ಕ್ರಮ ತೆಗೆದುಕೊಳ್ಳಲು ಮುಂದಾಗಿಲ್ಲ ಎಂದು ಕಿಡಿಕಾರಿದರು.
ಬಿಡಾಡಿ ದನ ಕರುಗಳನ್ನು ಬೇರೆಡೆ ಸಾಗಿಸಿ ಕ್ರಮ ತೆಗೆದುಕೊಳ್ಳದಿದ್ದರೆ ಮುಂದಾಗುವ ಅನಾಹುತಗಳಿಗೆ ಪುರಸಭೆಯೇ ಹೊಣೆ ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.