ರಬಕವಿ ಬನಹಟ್ಟಿ: ನಗರದಲ್ಲಿ ದಾನಮ್ಮದೇವಿ ಜಾತ್ರೆ ಹಾಗೂ ಕಾರ್ತಿಕೋತ್ಸವವು ಶನಿವಾರ ಸಂಜೆ ವಿಜೃಂಭಣೆಯಿಂದ ಜರುಗಿತು. ಬೆಳಿಗ್ಗೆ ದೇವಿಗೆ ಮಾಹಾಪೂಜೆ ಹಮ್ಮಿಕೊಳ್ಳಲಾಗಿತ್ತು. ನಂತರ ಭಕ್ತರಿಗೆ ದರ್ಶನಕ್ಕೆ ಅವಕಾಶ ನೀಡಲಾಯಿತು. ಮುತ್ತೈದೆಯರಿಗೆ ಉಡಿತುಂಬುವ ಕಾರ್ಯಕ್ರಮ ಜರುಗಿತು.
ನಂತರ ದಾನಮ್ಮ ದೇವಿಯ ಪಲ್ಲಕ್ಕಿ ಉತ್ಸವ ನಗರದ ಪ್ರಮುಖ ಬೀದಿಗಳಲ್ಲಿ ಸಕಲ ವಾದ್ಯ ಮೇಳಗಳೊಂದಿಗೆ ನಡೆಯಿತು. ಮಧ್ಯಾಹ್ನ ದೇವಸ್ಥಾನದಲ್ಲಿ ಪ್ರಸಾದ ವ್ಯವಸ್ಥೆಯನ್ನು ಮಾಡಲಾಗಿತ್ತು.
ಸಂಜೆ ನಡೆದ ಕಾರ್ತಿಕೋತ್ಸವವಕ್ಕೆ ವಿಜಯಕುಮಾರ ಉಮಾಶ್ರೀ ಮತ್ತು ಪ್ರಾಚಾರ್ಯ ಬಸವರಾಜ ಕೊಣ್ಣೂರ ಚಾಲನೆ ನೀಡಿದರು. ದೇವಸ್ಥಾನದ ಆವರಣದಲ್ಲಿ ಪಲ್ಲಕ್ಕಿ ಉತ್ಸವವನ್ನು ಭಕ್ತರು ನೆರವೇರಿಸಿದರು. ನಗರ ಸೇರಿದಂತೆ ಸುತ್ತ ಮುತ್ತಲಿನ ಗ್ರಾಮಗಳ ಸಾವಿರಾರು ಭಕ್ತರು ದೇವಿಯ ದರ್ಶನ ಪಡೆದುಕೊಂಡರು.
ಈ ಸಂದರ್ಭದಲ್ಲಿ ದಾನಮ್ಮ ದೇವಿ ಟ್ರಸ್ಟ್ ಅಧ್ಯಕ್ಷ ಶಿವಜಾತ ಉಮದಿ, ನಾರಾಯಣ ಬೋರಗಿ ನಾಯಕ, ಎಂ.ಎಸ್.ಬದಾಮಿ, ನೀಲಕಂಠ ಮುತ್ತೂರ, ಬಸವರಾಜ ಎಂಡಿಗೇರಿ, ಚಿದಾನಂದ ಗಾಳಿ, ಬಸವರಾಜ ತೆಗ್ಗಿ, ವಿಜಯಕುಮಾರ ಮಧುರಖಂಡಿ, ಉದಯ ಜಿಗಜಿನ್ನಿ, ಸಂಜಯ ತೇಲಿ ಸೇರಿದಂತೆ ಅನೇಕರು ಇದ್ದರು.