ಬೆಳಗಾವಿ: ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಹಲವು ಸಂಘಟನೆಗಳು ಸುವರ್ಣ ವಿಧಾನಸೌಧಧ ಸಮೀಪ ಸೋಮವಾರ ಪ್ರತಿಭಟನೆ ನಡಸಿದರು. ಉದ್ಯೋಗ ಮೀಸಲಾತಿ, ನಿಶ್ಚಿತ ಪಿಂಚಣಿ ಸೇರಿ ಇತರೆ ಬೇಡಿಕೆಗಳ ಈಡೇರಿಕೆ ಈ ಮೂಲಕ ಸರ್ಕಾರವನ್ನು ಒತ್ತಾಯಿಸಿದರು.
ಧರಣಿ ನಿರತ ಸಂಘಗಳು ಹಾಗೂ ಅವರ ಬೇಡಿಕೆ:
* ಉದ್ಯೋಗದಲ್ಲಿ ಪ್ರತ್ಯೇಕ ಮೀಸಲು ನೀಡಬೇಕು ಎಂದು ಆಗ್ರಹಿಸಿ ರಾಜ್ಯ ಕಿವುಡರ ಕಲ್ಯಾಣ ಸಂಘದಿಂದ ಪ್ರತಿಭಟನೆ.
* ಹಳೆಯ ನಿಶ್ಚಿತ ಪಿಂಚಣಿ ಯೋಜನೆ ಜಾರಿಗೆ ಆಗ್ರಹಿಸಿ ಮಾಧ್ಯಮಿಕ ಶಾಲಾ, ಪದವಿಪೂರ್ವ, ಪದವಿ, ಶಿಕ್ಷಣ, ತಾಂತ್ರಿಕ, ವೈದ್ಯಕೀಯ ಕಾಲೇಜುಗಳ ಸಂಘ ಹಾಗೂ ರಾಜ್ಯ ಅನುದಾನಿತ ಶಾಲಾ ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಂಘದಿಂದ ಧರಣಿ.
* ಟಿಪ್ಪು ಸುಲ್ತಾನ್ ಹೆಸರಿನಲ್ಲಿ ವಿಶ್ವವಿದ್ಯಾಲಯ ಸ್ಥಾಪಿಸಬೇಕು ಎಂದು ಯೂನಿಯನ್ ಮುಸ್ಲಿಂ ಲೀಗ್ ಕಾರ್ಯಕರ್ತರ ಆಗ್ರಹ.
* ಸಮುದಾಯ ಭವನ ನಿರ್ಮಿಸಿಕೊಡಬೇಕು ಎನ್ನುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಪ್ರದೇಶ ಕುರುಬರ ಸಂಘದ ಆಗ್ರಹ.
* ಸಾಗುವಳಿ ಭೂಮಿ ಮಂಜೂರಾತಿಗೆ ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘ ಹಾಗೂ ಕುಲವಳ್ಳಿ ಅನಧಿಕೃತ ಭೂಮಿ ಸಾಗುವಳಿದಾರರ ಸಂಘಗಳ ನೇತೃತ್ವದಲ್ಲಿ ರೈತರ ಪ್ರತಿಭಟನೆ.
* ಎಂಆರ್ಡಬ್ಲ್ಯು ಹಾಗೂ ವಿಆರ್ಡಬ್ಲ್ಯು ಆಗಿ ಕೆಲಸ ಮಾಡುತ್ತಿರುವವರ ಗೌರವಧನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ವಿವಿಧೋದ್ದೇಶ ಪುನರ್ವಸತಿ ಕಾರ್ಯಕರ್ತರು ಹಾಗೂ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ಒಕ್ಕೂಟದ ನೇತೃತ್ವದಲ್ಲಿ ನೂರಾರು ಅಂಗವಿಕಲರು ಪ್ರತಿಭಟಿಸಿದರು. ಸೇವೆ ಕಾಯಂ ಮಾಡಬೇಕು, ನಿವೃತ್ತಿ ವೇತನ ನೀಡಬೇಕು ಎಂದು ಒತ್ತಾಯ.