ನನ್ನ ಅಜ್ಜ (ತಾಯಿಯ ತಂದೆ) ಯಕ್ಷಗಾನ ಭಾಗವತರಾಗಿದ್ದು, ಶಿಕ್ಷಕರಾಗಿದ್ದ ನನ್ನ ಅಜ್ಜನ ತಮ್ಮ (ಅಗ್ಗರಗೋಣ ರಾಮಚಂದ್ರ ಮಾಸ್ತರ) ಕನ್ನಡದಲ್ಲಿ ಅಗಾಧ ಪಾಂಡಿತ್ಯ ಹೊಂದಿದ್ದರಿಂದ ನನಗೆ ಸಹಜವಾಗಿಯೆ ಕನ್ನಡದ ಬಗ್ಗೆ ಒಲವು ಮೂಡಿತ್ತು.
ನಾನು ಕಾಲೇಜು ಶಿಕ್ಷಣಕ್ಕಾಗಿ ಅಂಕೋಲೆಯ ಜಿ.ಸಿ.ಕಾಲೇಜು ಸೇರಿದ ನಂತರ ನನ್ನ ಕನ್ನಡ ಆಸಕ್ತಿಗೆ ನೀರೆರದವರು ಕನ್ನಡ ವಿಭಾಗದ ಮುಖ್ಯಸ್ಥರಾದ ಪ್ರೊ.ವಿ.ಏ.ಜೋಶಿಯವರು. ಅವರು ಪಾಠ ಮಾಡುವ ಶೈಲಿ, ವಿದ್ಯಾರ್ಥಿಗಳೊಡನೆ ಮಾತನಾಡುವ ರೀತಿ, ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳವ ಬಗೆ ನಮ್ಮೆಲ್ಲರಿಗೂ ಮಾದರಿಯಾಗಿತ್ತು.
ಅವರು ನಿವೃತ್ತಿ ಆದನಂತರವು ಸದಾ ಹೇಳುವ ‘ಕನ್ನಡವನ್ನು ಬಳಸಿ, ಕನ್ನಡವನ್ನು ಬೆಳಸಿ’ ಎನ್ನುವ ಮಾತು ನನಗೆ ಈಗ ಪ್ರಸ್ತುತ ಎನಿಸುತ್ತದೆ. ಕ್ಲಾಸಿಗೆ ಚಕ್ಕರ್ ಹೊಡೆಯುವ ನಮ್ಮ ಬಳಗ ಎಂದಿಗೂ ಅವರ ಕ್ಲಾಸಿಗೆ ಗೈರು ಆದದ್ದೆ ಇಲ್ಲ! ಅಂಥ ಗುರು ಮರೆಯಾದರೂ ನನ್ನ ನೆನಪಿನಲ್ಲಿ ಮರೆಯಾಗಿಲ್ಲ.