ನವದೆಹಲಿ: ಸರಕು ಸಾಗಣೆ ವಲಯಕ್ಕೆ ಕೇಂದ್ರ ಸರ್ಕಾರವು ಈಗ ಮೂಲಸೌಕರ್ಯ ಸ್ಥಾನ ನೀಡಿದೆ.
ಇದರಿಂದ ಸುಲಭವಾಗಿ ಸಾಲ ಪಡೆಯಲು ಸಾಧ್ಯವಾಗಲಿದ್ದು, ತಯಾರಿಕಾ ವಲಯಕ್ಕೆ ಉತ್ತೇಜನ ಸಿಗಲಿದೆ. ದೇಶದ ಆರ್ಥಿಕ ಪ್ರಗತಿಗೂ ಪೂರಕವಾಗಲಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.
ಶೈತ್ಯಾಗಾರ ಮತ್ತು ಗೋದಾಮು ಸೌಲಭ್ಯಗಳನ್ನೂ ಒಳಗೊಂಡು ಸರಕು ಸಾಗಣೆ ವಲಯಕ್ಕೆ ಮೂಲಸೌಕರ್ಯದ ಸ್ಥಾನ ನೀಡಲಾಗಿದೆ. ಇದರಿಂದ ಹೆಚ್ಚಿನ ಸ್ಪರ್ಧಾತ್ಮಕ ದರದಲ್ಲಿ ಭಾರಿ ಪ್ರಮಾಣದಲ್ಲಿ ಈ ವಲಯಕ್ಕೆ ಬಂಡವಾಳ ಆಕರ್ಷಿಸಲು ಅನುಕೂಲವಾಗಲಿದೆ.
ಅಭಿವೃದ್ಧಿ ಹೊಂದಿರುವ ದೇಶಗಳಿಗೆ ಹೋಲಿಸಿದರೆ, ಭಾರತದಲ್ಲಿ ಸರಕು ಸಾಗಣೆ ವೆಚ್ಚ ಗರಿಷ್ಠ ಮಟ್ಟದಲ್ಲಿದೆ. ವಲಯದ ಅಭಿವೃದ್ಧಿಯಿಂದಾಗಿ ದೇಶಿ ಮತ್ತು ವಿದೇಶಿ ಬೇಡಿಕೆ ಹೆಚ್ಚಾಗಲಿದೆ. ಈ ಮೂಲಕ ಸರಕುಗಳ ತಯಾರಿಕೆಗೆ ಮತ್ತು ಉದ್ಯೋಗ ಸೃಷ್ಟಿಗೆ ಉತ್ತೇಜನ ಸಿಗಲಿದೆ ಎಂದು ಸಚಿವಾಲಯ ತಿಳಿಸಿದೆ.
ಈ ವಲಯವು ಈಗ ಭಾರತೀಯ ಮೂಲಸೌಕರ್ಯ ಹಣಕಾಸು ಸಂಸ್ಥೆಯಿಂದ (ಐಐಎಫ್ಸಿಎಲ್) ಸಾಲ ಪಡೆಯುವ ಅರ್ಹತೆ ಪಡೆದುಕೊಳ್ಳಲಿದೆ.
ಬಹು ಮಾದರಿಯ ಸರಕು ಸಾಗಣೆ ಪಾರ್ಕ್ಗೆ ಕನಿಷ್ಠ ₹ 50 ಕೋಟಿ ಹೂಡಿಕೆ ಹಾಗೂ ಕನಿಷ್ಠ 10 ಎಕರೆ ಭೂಮಿ ಇರಬೇಕು. ಸರಣಿ ಶೈತ್ಯಾಗಾರ ಸೌಲಭ್ಯಕ್ಕೆ ₹ 15 ಲಕ್ಷ ಕನಿಷ್ಠ ಮತ್ತು ಗೋದಾಮಿಗೆ ₹ 25 ಲಕ್ಷ ಕೋಟಿ ಹೂಡಿಕೆ ಇದ್ದರೆ ಸರಕು ಸಾಗಣೆ ಮೂಸೌಕರ್ಯ ವ್ಯಾಪ್ತಿಗೆ ಬರಲಿದೆ.
ಉದ್ಯಮದ ಸ್ವಾಗತ: ಸರಕು ಸಾಗಣೆ ವಲಯದ ಪ್ರಮುಖ ಕಂಪನಿಗಳು ಸರ್ಕಾರದ ಈ ನಿರ್ಧಾರವನ್ನು ಸ್ವಾಗತಿಸಿವೆ. ಇದರಿಂದ ಕಡಿಮೆ ಬಡ್ಡಿದರದಲ್ಲಿ ಬಂಡವಾಳ ಸಂಗ್ರಹಿಸಲು ಸಾಧ್ಯವಾಗಲಿದ್ದು, ಒಟ್ಟಾರೆ ಸಾರಿಗೆ ವೆಚ್ಚ ತಗ್ಗಿಸಲೂ ಅನುಕೂಲವಾಗಲಿದೆ ಎಂದು ಪ್ರತಿಕ್ರಿಯಿಸಿವೆ.