ತುಮಕೂರು: ಸಂಚಾರಿ ಪೊಲೀಸರು ಯುವಕರಿಬ್ಬರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಕ್ಕೆ ತಾಳ್ಮೆ ಕಳೆದುಕೊಂಡ ಯುವಕರು ಪೊಲೀಸರ ಮೇಲೆ ಹಲ್ಲೆ ಮಾಡಿರುವ ಘಟನೆ ಬುಧವಾರ ನಡೆದಿದೆ.
ಈ ಘಟನೆಯಲ್ಲಿ ಯುವಕರಿಗೆ ಹಾಗೂ ಪೊಲೀಸರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ರಿಯಾಜ್ ಪಾಷಾ ಹಾಗೂ ಮಹಮದ್ ಯೂಸೂಪ್ ಎಂಬ ಯುವಕರು ಹೆಲ್ಮೆಟ್ ಇಲ್ಲದೆ ಬೈಕ್ ಒಡಿಸುತಿದ್ದರು. ಈ ವೇಳೆ ಪೊಲೀಸರು ಅವರನ್ನು ತಡೆದಿದ್ದಾರೆ. ನಂತರ ಲೈಸೆನ್ಸ್ ಸೇರಿದಂತೆ ಇತರೆ ದಾಖಲೆಗಳನ್ನು ಕೇಳಿದ್ದಾರೆ.
ಯುವಕರು ದಾಖಲೆ ನೀಡದಿದ್ದಾಗ ಪೊಲೀಸರು ಅವಾಚ್ಯ ಶಬ್ದಗಳಿಂದ ಬೈದಿದಾರೆ ಎನ್ನಲಾಗಿದೆ. ಹಾಗಾಗಿ ಯುವಕರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆದು ಅದು ಹೊಡೆದಾಟಕ್ಕೆ ತಿರುಗಿತು ಎಂದು ಸ್ಥಳೀಯರು ತಿಳಿಸಿದ್ದಾರೆ.
ಘಟನೆಯಲ್ಲಿ ಸಂಚಾರಿ ಪೂರ್ವ ಠಾಣೆಯ ಎಎಸ್ಐ ಬಸವರಾಜು ಅವರ ತುಟಿಗೆ ಗಾಯವಾಗಿದೆ. ಯುವಕರಿಬ್ಬರಿಗೂ ಸಣ್ಣಪುಟ್ಟ ಗಾಯಗಳಾಗಿದ್ದು ಅವರ ಶರ್ಟ್ಗಳು ಹರಿದಿವೆ. ಆ ಇಬ್ಬರು ಯುವಕರನ್ನು ಹೊಸಬಡಾವಣೆ ಠಾಣಾ ಪೊಲೀಸರು ಬಂಧಿಸಿದ್ದಾರೆ.