ಬೆಳಗಾವಿ: ‘ವಿದ್ಯುತ್ ಅಕ್ರಮದ ದೊಡ್ಡ ದೊಡ್ಡ ಮಾತನಾಡುತ್ತಿರುವವರು ಚರ್ಚೆಗೆ ಬನ್ನಿ’ ಎಂದು ಇಂಧನ ಸಚಿವ ಡಿ.ಕೆ. ಶಿವಕುಮಾರ್, ಬಿಜೆಪಿ ನಾಯಕರಿಗೆ ಸವಾಲು ಎಸೆದರು.
ವಿಧಾನಸಭೆಯಲ್ಲಿ ನಡೆದ ಚರ್ಚೆಯ ವೇಳೆ, ‘ಸೌರ ವಿದ್ಯುತ್ ಸ್ಥಾವರಕ್ಕೆ ಕೇಂದ್ರ ಸರ್ಕಾರ ನೀಡಿರುವ ನೆರವಿನ ಬಗ್ಗೆ ಹೇಳಿ’ ಎಂದು ಬಿಜೆಪಿಯ ಕೆ.ಜಿ. ಬೋಪಯ್ಯ ಸಲಹೆ ನೀಡಿದರು.
ಇದರಿಂದ ಕೆರಳಿದ ಶಿವಕುಮಾರ್, ‘ಏನೂ ಬಂದಿಲ್ಲ. ಕೇಂದ್ರದವರು ಯಾವ ದುಡ್ಡು ಉದುರಿಸಿಲ್ಲ. ಯಾವುದನ್ನೂ ಹೇಳಬಾರದು ಎಂದು ಸುಮ್ಮನಿದ್ದೇನೆ. ಎಲ್ಲವನ್ನೂ ಬಿಚ್ಚಿಡಲಾ’ ಎಂದು ಪ್ರಶ್ನಿಸಿದರು.
‘ಬಿಚ್ಚಿಡಿ’ ಎಂದು ಬೋಪಯ್ಯ ಹೇಳಿದರು. ‘ಕಲ್ಲಿದ್ದಲು ಖರೀದಿಯಲ್ಲಿ ದೊಡ್ಡ ಅಕ್ರಮ ನಡೆದಿದೆ ಎಂದು ನಿಮ್ಮ ನಾಯಕರು ಹೇಳುತ್ತಿದ್ದಾರೆ. ನಿಮ್ಮ ಪಕ್ಷದವರ ಬಗ್ಗೆ ಸದನ ಸಮಿತಿ ವರದಿಯಲ್ಲಿ ಉಲ್ಲೇಖವಾಗಿದೆ. ನನ್ನ ಬಳಿ ದಾಖಲೆ ಇದೆ. ನಿಮ್ಮ ಬಳಿ ಇದ್ದರೆ ದಾಖಲೆ ಸಮೇತ ಬನ್ನಿ’ ಎಂದು ಶಿವಕುಮಾರ್ ಹೇಳಿದರು.
ನೇಣು ಹಾಕಿ ಎಂದ ರೇವಣ್ಣ: ಮಧ್ಯ ಪ್ರವೇಶಿಸಿದ ಜೆಡಿಎಸ್ನ ಎಚ್.ಡಿ. ರೇವಣ್ಣ, ‘ವಿದ್ಯುತ್ ಖರೀದಿಯಲ್ಲಿ ನನ್ನಿಂದ ಏನಾದರೂ ತಪ್ಪಾಗಿದ್ದರೆ ವಿಧಾನಸೌಧದಲ್ಲೇ ನೇಣಿಗೆ ಹಾಕಿ’ ಎಂದು ಹೇಳಿದರು.
‘ನಮ್ಮನವನು ಕಣಯ್ಯ ನೀನು. ನಮ್ಮ ಜತೆಗೇ ಇರಬೇಕು ರೇವಣ್ಣ. ನಿನಗೆ ನೇಣು ಹಾಕಲ್ಲ’ ಎಂದು ಶಿವಕುಮಾರ್ ಹೇಳಿದರು.