ಆಲಮಟ್ಟಿ/ದೇವರಹಿಪ್ಪರಗಿ: ಕೃಷ್ಣಾ ಮೇಲ್ದಂಡೆ ಯೋಜನೆಯಡಿ ಕೃಷ್ಣಾ ನದಿಯಿಂದ ನೀರಾವರಿ ಕಲ್ಪಿಸುವ ‘ಬೂದಿಹಾಳ– ಪೀರಾಪುರ’ ಏತ ನೀರಾವರಿ ಯೋಜನೆಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ನ. 25 ರಂದು ಶಂಕುಸ್ಥಾಪನೆ ನೆರವೇರಿಸಲಿದ್ದು, ಜಿಲ್ಲೆಯ ಮತ್ತಷ್ಟು ಭೂಮಿ ನೀರಾವರಿಗೊಳಪಡಲಿವೆ.
ಈಗಾಗಲೇ ಚಿಮ್ಮಲಗಿ, ಮುಳವಾಡ ಏತ ನೀರಾವರಿ ಹಂತ– 3 ನೇ ಯೋಜನೆಯ ಕಾಮಗಾರಿ ಭರ
ದಿಂದ ಸಾಗಿದ್ದು, ಅದಕ್ಕೆ ಸಾಥ್ ನೀಡುವಂತೆ ‘ಬೂದಿಹಾಳ-–ಪೀರಾಪುರ’ ಏತ ನೀರಾವರಿ ಯೋಜನೆ ಹೊಸದಾಗಿ ರೂಪುಗೊಂಡಿದ್ದು, ಅದರ ಮುಖ್ಯಸ್ಥಾವರ ನಿರ್ಮಾಣದ ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ ಅಂತಿಮಗೊಂಡಿದ್ದು, 25 ರಂದು ಅಡಿಗಲ್ಲು ನಡೆಯಲಿದೆ.
ಯೋಜನೆಯ ವಿವರ: ನಾರಾಯಣಪುರ ಜಲಾಶಯದ ಹಿನ್ನೀರಿನಲ್ಲಿ ಮುದ್ದೇಬಿಹಾಳ ತಾಲ್ಲೂಕಿನ ಸಿದ್ದಾಪುರ ಗ್ರಾಮದ ಬಳಿ ಸಮುದ್ರಮಟ್ಟ 480 ಮೀ ದಿಂದ 585 ಮೀ ಎತ್ತರಕ್ಕೆ ನೀರನ್ನು ಎತ್ತಿ ಕಾಲುವೆಗಳ ಜಾಲದ ಮೂಲಕ ನೀರಾವರಿ ಸೌಲಭ್ಯ ಕಲ್ಪಿಸಲಾಗುತ್ತಿದೆ.
ಒಟ್ಟಾರೆ ಈ ಯೋಜನೆಯಡಿ 3.78 ಟಿಎಂಸಿ ಅಡಿ ನೀರಿನ ಬಳಕೆಯೊಂದಿಗೆ ಸುಮಾರು 20,243 ಹೆಕ್ಟೇರ್ ಭೂಮಿಗೆ ನೀರುಣಿಸಲಿದೆ.
ಬೂದಿಹಾಳ– ಪೀರಾಪುರ ಏತ ನೀರಾವರಿ ಯೋಜನೆಯ ಮುಖ್ಯ ಸ್ಥಾವರದ ನಿರ್ಮಾಣ ಕಾಮಗಾರಿಯನ್ನು ಟರ್ನ್ ಕೀ ಆಧಾರದ ಮೇಲೆ ₹ 523.03 ಕೋಟಿ ಮೊತ್ತಕ್ಕೆ ಟೆಂಡರ್ ನೀಡಲಾಗಿದ್ದು, ಸುಮಾರು ಎರಡು ವರ್ಷದಲ್ಲಿ ಮುಖ್ಯಸ್ಥಾವರ ನಿರ್ಮಾಣ ಕಾಮಗಾರಿ ಪೂರ್ಣಗೊಳ್ಳಲಿದೆ. ಶೀಘ್ರವೇ ಕಾಲುವೆಗಳ ಜಾಲ ನಿರ್ಮಾಣಕ್ಕೂ ಟೆಂಡರ್ ಕರೆದು, ಮುಖ್ಯಸ್ಥಾವರ ನಿರ್ಮಾಣ ಮುಗಿಯು ವುದರೊಳಗೆ ಕಾಲುವೆಗಳ ಜಾಲ
ವನ್ನು ನಿರ್ಮಿಸಲಾಗುವುದು ಎಂದು ಕೆಬಿಜೆಎನ್ಎಲ್ ಎಸ್ಇ ಆರ್. ತಿರಮೂರ್ತಿ ಹೇಳಿದರು.
ಗ್ರಾಮಗಳು: ಮುದ್ದೇಬಿಹಾಳ ತಾಲ್ಲೂಕಿನ ಮಸಕನಾಳ, ಮೈಲೇಶ್ವರ, ಬಿಳಿಭಾವಿ, ಸಾಲವಾಡಗಿ, ಬಂಡೆಪ್ಪನಹಳ್ಳಿ, ಗುಂಡಕನಾಳ, ನಾವದಗಿ, ಲಕ್ಕಂಡಿ, ಬೇಲೂರ, ಶೆಳ್ಳಗಿ, ಕೊಡಗಾನೂರ, ಕೊರಗನೂರ, ಬಂಟನೂರ, ಗೋಟಕಂಡಕಿ, ಪೀರಾಪುರ, ಗುಡಿ ಸೋಮನಾಳ, ಕ್ಯಾಗಿನಾಳ, ಹೊಸಹಳ್ಳಿ, ಹೂವಿನಹಳ್ಳಿ, ತುಂಬಗಿ, ಪತ್ಯೇಪೂರ, ಬೋಲವಾಡ, ಗುಟ್ಟಿಹಾಳ, ಬೊಮ್ಮನಹಳ್ಳಿ, ತಾಳಿಕೋಟೆ ಮತ್ತು ನಾಗಪೂರ. (ಒಟ್ಟು 26 ಗ್ರಾಮಗಳು, ನೀರಾವರಿಯಾಗುವ ಕ್ಷೇತ್ರ: 11,118 ಹೆಕ್ಟೇರ್ )
ಸಿಂದಗಿ ತಾಲ್ಲೂಕಿನ ನೀರಲಯೋಗಿ, ಅಸ್ಕಿ, ಬನ್ನಿಹಟ್ಟಿ, ಜಲಪೂರ, ಬಿಂಜಲಭಾವಿ, ಬೇಕಿನಾಳ, ಎನಕಿನಾಳ, ತುರಕನಗರಿ, ಬೂದಿಹಾಳ, ಅಲಗಾರ, ಕೆರೂಟಗಿ, ರಾಂಪೂರ, ಹುಣಸಿಹಾಳ, ಕಲಕೇರಿ, ಕುದರಗುಡ ಮತ್ತು ಕೊಡ್ರಾಪೂರ. (ಒಟ್ಟು 16 ಗ್ರಾಮಗಳು, 9125 ಹೆಕ್ಟೇರ್)
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.