ರಾಮನಗರ: ಮೇಕೆದಾಟು ಯೋಜನೆಯನ್ನು ಕೂಡಲೆ ಅನುಷ್ಠಾನಗೊಳಿಸಬೇಕು ಎಂದು ಆಗ್ರಹಿಸಿ ಮೇಕೆದಾಟು ಹೋರಾಟ ಸಮಿತಿ ಸದಸ್ಯರು ಮಂಗಳವಾರ ಕಂದಾಯ ಭವನದ ಎದುರು ರಸ್ತೆ ತಡೆ ಆರಂಭಿಸಿದ್ದಾರೆ.
ಪ್ರತಿಭಟನೆಯಿಂದಾಗಿ ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ವಾಹನ ಸಂಚಾರ ಅಸ್ತವ್ಯಸ್ತಗೊಂಡಿದ್ದು, ವಾಹನಗಳು ಸಾಲಾಗಿ ನಿಂತಿವೆ. ಎರಡೂ ಕಡೆ ರಸ್ತೆಯ ಮೇಲೆ ರೈತರು ಕುಳಿತಿದ್ದು, ವಾಹನಗಳ ಓಡಾಟಕ್ಕೆ ತಡೆ ಒಡ್ಡಿದ್ದಾರೆ.
ಸರ್ಕಾರ ಇನ್ನಾದರೂ ನೆಪ ಹೇಳುವುದನ್ನು ಬಿಟ್ಟು ಯೋಜನೆಯನ್ನು ಕಾರ್ಯರೂಪಕ್ಕೆ ತರಬೇಕು. ಇಲ್ಲವಾದಲ್ಲಿ ಮುಂಬರುವ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಾಗುವುದು ಎಂದು ರೈತರು ಎಚ್ಚರಿಸಿದ್ದಾರೆ.
ವಿಧಾನಸೌಧಕ್ಕೆ ಶೀಘ್ರದಲ್ಲಿಯೇ ಪಾದಯಾತ್ರೆ ಹಮ್ಮಿಕೊಳ್ಳುವುದಾಗಿ ತಿಳಿಸಿದ್ದಾರೆ.