ಬಳ್ಳಾರಿ: ‘ಎಚ್ಐವಿ ಸೋಂಕು ಅಪಾಯ ಕಾರಿಮಟ್ಟದಲ್ಲಿರುವ ವರಿಗಷ್ಟೇ ಎಆರ್ಟಿ ಚಿಕಿತ್ಸೆ ನೀಡುವ ವ್ಯವಸ್ಥೆ ಬದಲಾ ಗಿದ್ದು, ಹಿಂದಿನ ವರ್ಷ ದಿಂದ ಎಲ್ಲ ಸೋಂಕಿತರಿಗೂ ಚಿಕಿತ್ಸೆ ನೀಡಲಾಗುತ್ತಿದೆ’ ಎಂದು ಪ್ರಭಾರ ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ.ನಿಜಾಮುದ್ದೀನ್ ತಿಳಿಸಿದರು.
ವಿಶ್ವ ಏಡ್ಸ್ ದಿನಾಚರಣೆ ಕುರಿತು ಮಾಹಿತಿ ನೀಡುವ ಸಲುವಾಗಿ ನಗರದಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿದ ಅವರು, ‘ಸೋಂಕಿತರಿಗಾಗಿ ಜಿಲ್ಲೆಯಲ್ಲಿ ಸಮಗ್ರ ಆಪ್ತ ಸಮಾಲೋಚನೆ ಮತ್ತು ಪರೀಕ್ಷಾ ಕೇಂದ್ರಗಳು 18 ಇದ್ದು, ಅವುಗಳೊಂದಿಗೆ 24 ಆರೋಗ್ಯ ಕೇಂದ್ರಗಳಲ್ಲಿ, ಖಾಸಗಿ ಸಹಭಾಗಿತ್ವದಲ್ಲಿ 12 ಕೇಂದ್ರಗಳಲ್ಲಿ ಉಚಿತವಾಗಿ ಸಮಾಲೋಚನೆ, ರಕ್ತಪರೀಕ್ಷೆ ನಡೆಸಲಾಗುತ್ತಿದೆ’ ಎಂದರು.
47 ಮಕ್ಕಳು: ‘ಸೋಂಕಿತ ಮಹಿಳೆಯರ 787 ಮಕ್ಕಳಲ್ಲಿ 47 ಮಕ್ಕಳಿಗೆ ಸೋಂಕಿರುವುದು ಪತ್ತೆಯಾಗಿದೆ. ಜನಿಸಿದ 18 ತಿಂಗಳು ಪೂರೈಸಿದ 686 ಮಕ್ಕಳ ಪೈಕಿ 11 ಮಕ್ಕಳಿಗೆ ಸೋಂಕಿದೆ’ ಎಂದರು.
13ನೇ ಸ್ಥಾನ: ‘ಸೋಂಕಿತರ ಪ್ರಮಾಣವನ್ನು ಅನುರಿಸಿ 2016–17ನೇ ಸಾಲಿನಲ್ಲಿ ಕರ್ನಾಟಕ ಏಡ್ಸ್ ನಿಯಂತ್ರಣ ಸೊಸೈಟಿಯು ಜಿಲ್ಲಾವಾರು ಸ್ಥಾನಗಳ ಪಟ್ಟಿಯನ್ನು ಸಿದ್ಧಪಡಿಸಿದ್ದು ಬಳ್ಳಾರಿಯು 7ನೇ ಸ್ಥಾನದಲ್ಲಿದೆ. ಹಿಂದಿನ ವರ್ಷ 3ನೇ ಸ್ಥಾನದಲ್ಲಿತ್ತು. ಗರ್ಭಿಣಿಯರಲ್ಲಿ ಸೋಂಕು ವಿಷಯದಲ್ಲಿ ಜಿಲ್ಲೆಯು 5ನೇ ಸ್ಥಾನದಲ್ಲಿದೆ. ಹತ್ತು ವರ್ಷದ ಅವಧಿಯಲ್ಲಿ ಜಿಲ್ಲೆಯಲ್ಲಿ ಸೋಂಕಿತರ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದೆ. ಇದು ಸಮಾಧಾನಕರ ವಿಷಯ. ಆದರೂ ಸೋಂಕು ನಿಯಂತ್ರಣದಲ್ಲಿ ಜಿಲ್ಲೆ ಸಾಧಿಸಬೇಕಾದ್ದು ಬಹಳಷ್ಟಿದೆ’ ಎಂದರು.
‘ನನ್ನ ಆರೋಗ್ಯ ನನ್ನ ಹಕ್ಕು’ ‘ಆರೋಗ್ಯ ಎಲ್ಲರ ಹಕ್ಕು’ ಎಂಬ ಧ್ಯೇಯ ವಾಕ್ಯದ ಅಡಿ, ‘ನನ್ನ ಆರೋಗ್ಯ ನನ್ನ ಹಕ್ಕು’ ಘೋಷಣೆ ಅಡಿ ಈ ಬಾರಿ ವಿಶ್ವ ಏಡ್ಸ್ ದಿನವನ್ನು ಆಚರಿಸಲಾಗುವುದು.
ಜಿಲ್ಲಾ ಆರೋಗ್ಯಾಧಿಕಾರಿ ಕಚೇರಿಯಿಂದ ನಡೆಯುವ ಜಾಗೃತಿ ಮೆರವಣಿಗೆಯಲ್ಲಿ ಅಂಗನವಾಡಿ, ಆಶಾ ಕಾರ್ಯಕರ್ತೆಯರು ಸೇರಿ 350ಕ್ಕೂ ಹೆಚ್ಚು ಮಂದಿ ಪಾಲ್ಗೊಳ್ಳಲಿದ್ದಾರೆ. ನಂತರ ಜಿಲ್ಲಾ ಆರೋಗ್ಯಾಧಿಕಾರಿ ಕಚೇರಿಯಲ್ಲಿ ವೇದಿಕೆ ಕಾರ್ಯಕ್ರಮ ನಡೆಯಲಿದೆ ಎಂದು ನಿಜಾಮುದ್ದೀನ್ ತಿಳಿಸಿದರು.
ಕಾರ್ಯಕ್ರಮ ಆಯೋಜನೆಗೆ ಕೇವಲ ₹10,000 ಮಾತ್ರ ನಿಗದಿ ಮಾಡಿರುವುದರಿಂದ ಹೆಚ್ಚಿನ ಪ್ರಚಾರ ಮಾಡಲು ಸಾಧ್ಯವಾಗಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದರು. ಏಡ್ಸ್ ನಿಯಂತ್ರಣ ಘಟಕದ ಮೇಲ್ವಿಚಾರಕ ಸುರೇಶ್ ಉಪಸ್ಥಿತರಿದ್ದರು.
* *
ಜಿಲ್ಲೆಯಲ್ಲಿ ಮಾತ್ರ ಎಆರ್ಟಿ ಚಿಕಿತ್ಸಾ ಕೇಂದ್ರವಿದ್ದಾಗ ಸೋಂಕು ಪತ್ತೆಯಾದ ಇತರೆ ಜಿಲ್ಲೆಗಳ ಮಂದಿ ಅಲ್ಲಿಯೇ ಚಿಕಿತ್ಸೆ ಮುಂದುವರಿಸಿದ್ದಾರೆ
ಡಾ.ನಿಜಾಮುದ್ದೀನ್
ಪ್ರಭಾರಿ ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.