ರಾಮನಗರ: ಸಮಾಜದಲ್ಲಿ ಎಚ್ಐವಿ ಸೋಂಕಿತರನ್ನು ತಾರತಮ್ಯದಿಂದ ಕಾಣದೆ ಅವರಲ್ಲಿ ಆತ್ಮಸ್ಥೈರ್ಯ ತುಂಬುವ ಕೆಲಸ ಹೆಚ್ಚಾಗಿ ನಡೆಯಬೇಕಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಆರ್. ಲತಾ ಹೇಳಿದರು.
ಇಲ್ಲಿನ ಜಿಲ್ಲಾ ಆಸ್ಪತ್ರೆಯ ಆವರಣ ದಲ್ಲಿ ಎಚ್ಐವಿ ಕುರಿತು ಶುಕ್ರವಾರ ಹಮ್ಮಿಕೊಂಡಿದ್ದ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಎಚ್ಐವಿ ಪೀಡಿತರನ್ನು ನೋಡುವ ದೃಷ್ಟಿಕೋನ ಬದಲಾಗಬೇಕಿದೆ. ಸೋಂಕಿತರನ್ನು ಪ್ರೀತಿ, ವಿಶ್ವಾಸದಿಂದ ಕಂಡು ಅವರಲ್ಲಿ ಆತ್ಮವಿಶ್ವಾಸ ಮೂ ಡಿಸಲು ಪ್ರತಿಯೊಬ್ಬರೂ ಮುಂದಾ ಗಬೇಕಿದೆ ಎಂದರು.
ಎಚ್ಐವಿ ಕುರಿತು ವಿಶೇಷವಾಗಿ ಯುವಜನರಲ್ಲಿ ಜಾಗೃತಿ ಮೂಡಿಸುವ ಅವಶ್ಯಕತೆಯಿದೆ. ರೋಗ ಹರಡದಂತೆ ವಹಿಸಬೇಕಿರುವ ಮುನ್ನೆಚರಿಕೆ ವಿಧಾನಗಳ ಕುರಿತು ತಿಳಿವಳಿಕೆ ನೀಡಬೇಕಿದೆ. ಜಿಲ್ಲಾ ಆರೋಗ್ಯ ಇಲಾಖೆ ಯೊಂದಿಗೆ ಸ್ವಯಂ ಸೇವಾ ಸಂಸ್ಥೆಗಳು ಒಗ್ಗೂಡಿ ರೋಗದ ಪರಿಣಾಮಗಳ ಬಗ್ಗೆ ಮನವರಿಕೆ ಮಾಡಿಕೊಡಬೇಕಿದೆ ಎಂದು ಅವರು ಹೇಳಿದರು.
ಬೀದಿ ನಾಟಕ ಪ್ರದರ್ಶನ : ಇಲ್ಲಿನ ಹಳೆ ಬಸ್ ನಿಲ್ದಾಣ ಬಸ್ ನಿಲ್ದಾಣ, ಎಪಿಎಂಸಿ ಮಾರುಕಟ್ಟೆ, ವಾಟರ್ ಟ್ಯಾಂಕ್ ವೃತ್ತದಲ್ಲಿ ಎಚ್.ಐ.ವಿ.ಗೆ ಸಂಬಂಧಿಸಿದ ಬೀದಿ ನಾಟಕವನ್ನು ಪ್ರದರ್ಶಿಸಲಾಯಿತು.
ವಿವಿಧ ಜಾನಪದ ಕಲಾ ತಂಡಗಳು, ಫಾರ್ಮಸಿ ಮತ್ತು ಅರೆ ವೈದ್ಯಕೀಯ ತರಬೇತಿ ಕಾಲೇಜಿನ ವಿದ್ಯಾರ್ಥಿಗಳು ಏಡ್ಸ್ ರೋಗದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಬೀದಿ ನಾಟಕಗಳನ್ನು ಪ್ರದರ್ಶಿಸಿದರು.
ಏಡ್ಸ್ ರೋಗದ ಬಗ್ಗೆ ಭಯ ಬೇಡ. ರೋಗ ನಿರೋಧಕ ಶಕ್ತಿಯನ್ನು ಕಳೆಯುವ ಏಡ್ಸ್ ರೋಗವನ್ನು ನಿಯಮಿತವಾಗಿ ತಪಾಸಣೆ ಮಾಡಿಸಿ ಕೊಳ್ಳುವ ಮತ್ತು ಪೌಷ್ಠಿಕ ಆಹಾರ ಸೇವನೆಯಿಂದ ಸ್ವಲ್ಪ ಮಟ್ಟಿಗೆ ನಿಯಂತ್ರಣದಲ್ಲಿಟ್ಟುಕೊಳ್ಳಬಹುದು.
ಏಡ್ಸ್ ರೋಗ ಹೊಂದಿರುವ ವ್ಯಕ್ತಿಗಳ ಜತೆ ಊಟ ತಿಂಡಿ, ಬಟ್ಟೆ, ತಂಪು ಪಾನೀಯ ಹಂಚಿಕೊಳ್ಳುವುದರಿಂದ ಮತ್ತು ಕೆಮ್ಮು, ಸೀನು, ಅಥವಾ ಗಾಳಿ ಸೇವನೆಯಿಂದ, ಸೊಳ್ಳೆ ಕಚ್ಚುವುರಿಂದ, ಒಂದೆ ಸ್ನಾನದ ಮನೆ, ಅಡುಗೆ ಮನೆ, ಶೌಚಾಲಯ ಬಳಸುವುದರಿಂದ ಎಚ್.ಐ.ವಿ.ಹರಡುವುದಿಲ್ಲ. ಆದ್ದರಿಂದ ರೋಗಿಗಳ ಜತೆ ಸೌಹಾರ್ದ ಸಂಬಂಧ ಹೊಂದುವುದರ ಜತೆಗೆ ಪ್ರೀತಿ, ವಿಶ್ವಾಸದಿಂದ ಅವರಿಗೆ ಧೈರ್ಯ ತುಂಬಬೇಕು ಎಂದು ನಾಟಕದ ಮೂಲಕ ಮನವರಿಕೆ
ಮಾಡಿಕೊಟ್ಟರು.
ಸರ್ಕಾರಿ ಆಸ್ಪತ್ರೆಗಳಲ್ಲಿ ಇರುವ ಆಪ್ತಮಿತ್ರ ಐಸಿಟಿಸಿ ಕೇಂದ್ರಗಳಲ್ಲಿ (ಸಮಗ್ರ ಆಪ್ತ ಸಮಾಲೋಚನೆ ಮತ್ತು ಪರೀಕ್ಷಾ ಕೇಂದ್ರ)ಉಚಿತ ಪರೀಕ್ಷೆ ಮಾಡಲಾಗುತ್ತದೆ. ಸ್ನೇಹಪರ ಆಪ್ತ ಸಮಾಲೋಚಕರು ಉಚಿತ ಆಪ್ತ ಸಮಾಲೋಚನೆ ಮಾಡುತ್ತಾರೆ. ಮಾಹಿತಿಯನ್ನು ಯಾರಿಗೂ ತಿಳಿಸದೆ ಗೌಪ್ಯವಾಗಿಡುತ್ತಾರೆ ಎಂದು ಮಾಹಿತಿ ನೀಡಿದರು. ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಕೆ.ವಿ. ಶಿವರಾಜ್, ರೋಟರಿ ಕ್ಲಬ್ನ ಅಧ್ಯಕ್ಷ ಶಿವಲಿಂಗಯ್ಯ, ಪದಾಧಿಕಾರಿ ಗಳಾದ ಕೆ.ಎಸ್. ಕಾಂತರಾಜು, ಎಸ್. ಶಿವಕುಮಾರ್ ಇದ್ದರು.
ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ತಡೆಗಟ್ಟುವ ಮತ್ತು ನಿಯಂತ್ರಣ ಘಟಕ ಹಾಗೂ ರೋಟರಿ ಕ್ಲಬ್ ಇವರ ಸಂಯುಕ್ತಾಶ್ರಯದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.