ಸುರಪುರ: ‘ಅಂಗವೈಕಲ್ಯ ಎನ್ನುವುದು ಕೇವಲ ದೈಹಿಕ ದೌರ್ಬಲ್ಯವೇ ಹೊರತು ಮಾನಸಿಕ ದೌರ್ಬಲ್ಯವಲ್ಲ. ಅಂಗವಿಕಲ ಮಕ್ಕಳಿಗೆ ಅನುಕಂಪ ಬೇಡ. ಅವಕಾಶ ನೀಡಿ’ ಎಂದು ಶಿಕ್ಷಕ ಎಸ್.ಎಸ್. ಮಾರನಾಳ ಕರೆ ನೀಡಿದರು. ವಿಶ್ವ ಅಂಗವಿಕಲ ದಿನಾಚರಣೆ ಅಂಗವಾಗಿ ಶಿಕ್ಷಣ ಇಲಾಖೆ ಏರ್ಪಡಿಸಿದ್ದ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಪಾಲಕರು, ಸಮುದಾಯ, ಶಿಕ್ಷಕರು ಅಂಗವಿಕಲ ಮಕ್ಕಳನ್ನು ಮುಖ್ಯವಾಹಿನಿಗೆ ತರಬೇಕು. ಸುಧಾಚಂದ್ರನ್, ಪುಟ್ಟರಾಜ ಗವಾಯಿ, ವಿದ್ಯಾಸಾಗರ, ಥಾಮಸ್ ಅಳ್ವಾ ಎಡಿಸನ್ ಮುಂತಾದ ಅಂಗವಿಕಲರು ಸಾಧನೆ ಮಾಡಿದ್ದು ಅಪಾರ. ಇಂತಹ ಮಹಾನ್ ವ್ಯಕ್ತಿಗಳನ್ನು ಆದರ್ಶವಾಗಿಟ್ಟುಕೊಂಡು ಅಂಗವಿಕಲ ಮಕ್ಕಳು ಮುಂದೆ ಬರಬೇಕು’ ಎಂದು ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಕ್ಷೇತ್ರ ಸಮನ್ವಯಾಧಿಕಾರಿ ಅಮರೇಶ ಕುಂಬಾರ ಮಾತನಾಡಿ, ‘ಅಂಗವಿಕಲ ಮಕ್ಕಳಿಗೆ ಸರ್ಕಾರ ಉಚಿತ ವೈದ್ಯಕೀಯ ತಪಾಸಣೆ, ಸಾರಿಗೆ ಭತ್ಯೆ, ಬೆಂಗಾವಲು ಭತ್ಯೆ, ವಿವಿಧ ಸಲಕರಣೆಗಳ ವಿತರಣೆ, ಫಿಜಿಯೋಥೆರಪಿ, ಕರೆಕ್ಟೀವ್ ಸರ್ಜರಿ ಇತರ ಸೌಲಭ್ಯಗಳನ್ನು ನೀಡುತ್ತಿದೆ. ಅರ್ಹರು ಇದರ ಸದುಪಯೋಗ ಪಡೆದುಕೊಳ್ಳಬೇಕು’ ಎಂದು ತಿಳಿಸಿದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸೋಮರೆಡ್ಡಿ ಮಂಗಿಹಾಳ ಉದ್ಘಾಟಿಸಿದರು. ವೆಂಕಟೇಶ ಗಡ್ಡದ, ಲಕ್ಷ್ಮಣ ಬಿರಾದಾರ, ನಿಂಗಪ್ಪ ಪೂಜಾರಿ, ರವಿ, ಹಣಮಂತ್ರಾಯ ಪೂಜಾರಿ, ಜಾಕೀರ್ ಹುಸೇನ್, ಶಂಕ್ರಪ್ಪ ಬಡಗಾ, ಶ್ರೀಶೈಲ ಯಂಕಂಚಿ, ರಹಿಂ ಹವಾಲ್ದಾರ್, ಮಲ್ಲಿಕಾರ್ಜುನ ಕಟ್ಟಿಮನಿ ಇದ್ದರು.
ಮಹಾದೇವಪ್ಪ ಗುತ್ತೇದಾರ ಸ್ವಾಗತಿಸಿದರು. ಮೌನೇಶ ನಿರೂಪಿಸಿದರು. ವೀರಣ್ಣಗೌಡ ಪ್ರಾಸ್ತಾವಿಕ ಮಾತನಾಡಿದರು. ಓಂಪ್ರಕಾಶ ವಂದಿಸಿದರು.
ಮಕ್ಕಳಿಗೆ ಕ್ರೀಡಾಕೂಟ, ಸಾಂಸ್ಕೃತಿಕ ಕಾರ್ಯಕ್ರಮ, ಪಾಲಕರಿಗೆ ಜನಪದಗೀತೆ, ಕುಂಟೆಬಿಲ್ಲೆ ಸ್ಪರ್ಧೆ ನಡೆಯಿತು.