ಬೆಂಗಳೂರು: ಮಹದೇವಪುರ ಕ್ಷೇತ್ರದ ದೊಡ್ಡದಾದ ಕೆರೆಯಾಗಿರುವ ವರ್ತೂರು ಕೆರೆಕಟ್ಟೆ ಮೇಲಿನ ರಸ್ತೆಯ ಅಕ್ಕಪಕ್ಕದಲ್ಲಿ ಮುಳ್ಳಿನ ಗಿಡಗಳು ಬೆಳೆದಿವೆ. ಇದರಿಂದಾಗಿ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರಿಗೆ ತೀವ್ರ ಅಡಚಣೆ ಉಂಟಾಗುತ್ತಿದೆ.
ವರ್ತೂರು ಕೆರೆಕಟ್ಟೆ ಮೇಲಿನ ರಸ್ತೆಯು ಸರ್ಜಾಪುರ – ವೈಟ್ಫೀಲ್ಡ್ - ಹೊಸಕೋಟೆ ಮುಖ್ಯರಸ್ತೆಯಾಗಿದೆ. ಈ ರಸ್ತೆಯಲ್ಲಿ ದಿನವೂ ಸಾವಿರಾರು ವಾಹನಗಳು ಸಂಚರಿಸುತ್ತವೆ. ಮುಳ್ಳಿನ ಗಿಡಗಳು ಬೆಳೆದುಕೊಂಡಿರುವುದರಿಂದ ವಾಹನಗಳನ್ನು ಸರಾಗವಾಗಿ ಓಡಿಸಲಾಗುತ್ತಿಲ್ಲ ಎಂದು ಸವಾರ ಶ್ರೀನಿವಾಸ ಗೌಡ ಅಳಲು ತೋಡಿಕೊಂಡರು.
ಕೆರೆಗೆ ಭದ್ರತಾ ಬೇಲಿ ಅಳವಡಿಸಿಲ್ಲ. ಹಾಗಾಗಿ ಕೆರೆಯ ಅಂಚಿನಲ್ಲಿ ಹೇರಳ ಪ್ರಮಾಣದಲ್ಲಿ ಬೆಳೆದಿರುವ ಕುರುಚಲು ಗಿಡಗಳು ರಸ್ತೆಯತ್ತ ವಾಲಿಕೊಂಡಿವೆ ಎಂದರು.
ವಾರದೊಳಗೆ ಮುಳ್ಳಿನ ಗಿಡಗಳನ್ನು ತೆರವುಗೊಳಿಸದಿದ್ದಲ್ಲಿ ವರ್ತೂರು ಮುಖ್ಯರಸ್ತೆಯನ್ನು ಬಂದ್ ಮಾಡಿ ಪ್ರತಿಭಟನೆ ನಡೆಸುತ್ತೇವೆ ಎಂದು ಸ್ಥಳೀಯ ಶ್ರೀನಿವಾಸ ಗೌಡ ಎಚ್ಚರಿಸಿದರು.