ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುರುವಾರ, 7–12–1967

Last Updated 6 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ಗುರುವಾರ, 7–12–1967

ಮಹಾಜನ್ ವರದಿ ಚರ್ಚೆಗೆ ಸರ್ವಪಕ್ಷಗಳ ಸಮ್ಮೇಳನ

(ನಾರಾಯಣಸ್ವಾಮಿ ಅವರಿಂದ)

ನವದೆಹಲಿ, ಡಿ. 6– ಮಹಾಜನ್ ಆಯೋಗದ ಶಿಫಾರಸುಗಳ ಬಗ್ಗೆ ‘ರಾಷ್ಟ್ರೀಯ ಒಟ್ಟಭಿಪ್ರಾಯ’ ರೂಪಿಸುವುದಕ್ಕಾಗಿ ಸಂಸತ್ತಿನಲ್ಲಿರುವ ಎಲ್ಲ ರಾಜಕೀಯ ಪಕ್ಷಗಳ ನಾಯಕರ ಸಮ್ಮೇಳನವೊಂದನ್ನು ಕರೆಯಲು ಕೇಂದ್ರ ಸರಕಾರ ನಿರ್ಧರಿಸಿದೆ.

ಲೋಕಸಭೆಯಲ್ಲಿ ಇಂದು ಗೃಹ ಸಚಿವ ಶ್ರೀ ಚವಾಣರು ಈ ನಿರ್ಧಾರ ಪ್ರಕಟಿಸುತ್ತಲೇ ಮೈಸೂರಿನ ಸದಸ್ಯರು ಕಟುವಾಗಿ ಪ್ರತಿಭಟಿಸಿದರು.

‘ವರದಿಯನ್ನು ಮೂಲೆಗುಂಪು ಮಾಡಲು ಪಿತೂರಿ ನಡೆದಿದೆಯೇ?’ ನೀವು ಮಹಾರಾಷ್ಟ್ರದವರಾದುದರಿಂದ ಹೀಗಾಯಿತೇ?’ ಎಂದು ಪಿ.ಎಸ್.ಪಿ. ಸದಸ್ಯ ಶ್ರೀ ಕೆ. ಲಕ್ಕಪ್ಪನವರು ಪ್ರಶ್ನಿಸಿದರು.

ಮಹಾಜನ್ ಆಯೋಗದ ಶಿಫಾರಸುಗಳನ್ನು ಸಂಪೂರ್ಣವಾಗಿ ಕಾರ್ಯಗತಗೊಳಿಸದಿರಬಹುದೆಂದು ಶ್ರೀ ಚವಾಣರ ಪ್ರಕಟಣೆಗೆ ಸ್ವಾಭಾವಿಕವಾಗಿಯೇ ವ್ಯಾಖ್ಯಾನ ಮಾಡಿದ ಮೈಸೂರಿನ ಇತರ ಸದಸ್ಯರೂ ಪ್ರಬಲವಾಗಿ ಪ್ರತಿಭಟಿಸಿದರು.

ಲೋಕಸಭೆಯಲ್ಲಿ ಭಾಷಾ ಮಸೂದೆ ಪ್ರತಿಗೆ ಬೆಂಕಿ

ನವದೆಹಲಿ, ಡಿ. 6– ಮಸೂದೆ ಪ್ರತಿಯೊಂದಕ್ಕೆ ಬೆಂಕಿ ಹಚ್ಚಿದ ಅಭೂತಪೂರ್ವ ಘಟನೆಯೊಂದು ಇಂದು ಲೋಕಸಭೆಯಲ್ಲಿ ನಡೆಯಿತು.

ಅಧಿಕೃತ ಭಾಷಾ ಮಸೂದೆ ಎಷ್ಟು ಕಿಚ್ಚು ಹೊತ್ತಿಸಬಹುದೆಂಬುದನ್ನು ಜನಸಂಘದ ಸದಸ್ಯರೊಬ್ಬರು ಅರ್ಥಾತ್ ತೋರಿಸಿದರು.

ಶ್ರೀ ಹುಕುಂಚಂದ್ ಕಚ್ಚಾಯಿಯವರು ಸಭೆಯಲ್ಲಿ ಮಸೂದೆ ಪ್ರತಿಯನ್ನು ಸುಟ್ಟು ಹಾಕಿ ಇಡೀ ಸಭೆಯನ್ನೇ ದಿಗ್ಭ್ರಾಂತಗೊಳಿಸಿದರು.

ಛೀಮಾರಿ

ನವದೆಹಲಿ, ಡಿ. 6– ಅಧಿಕೃತ ಮಸೂದೆ ಪ್ರತಿಯೊಂದನ್ನು ಇಂದು ಲೋಕಸಭೆಯಲ್ಲಿ ಸುಟ್ಟ ಶ್ರೀ ಹುಕುಂಚಂದ್ ಕಚ್ಚಾಯಿಯವರಿಗೆ ಸಂಸತ್ತಿನ ಜನಸಂಘ ಸದಸ್ಯರ ತಂಡ ಛೀಮಾರಿ ಹಾಕಿತು. ಮುಂದೆ ಇಂತಹ ನಡವಳಿಕೆ ಪುನರಾವರ್ತನೆಯಾಗಕೂಡದೆಂದೂ ಅದು ಎಚ್ಚರಿಸಿತು.

ಕೇಳಸಿಗದಂತಾಗುವ ಮುನ್ನ ಜನಪದ ಸಾಹಿತ್ಯ ಸಂಗ್ರಹ ಅಗತ್ಯವೆಂದು ಒಡೆಯರ್

(ವಿಶೇಷ ಪ್ರತಿನಿಧಿಯಿಂದ)

ತರೀಕೆರೆ, ಡಿ. 6 – ಜನಜೀವನದಿಂದ ಮೂಡಿಬಂದು, ಜನರ ನೋವು–ನಲಿವು, ಸಂಸ್ಕೃತಿಗಳನ್ನು ಪ್ರತಿಬಿಂಬಿಸುವ ಜನಪದ ಸಾಹಿತ್ಯ ಕೇಳ ಸಿಗದಂತಾಗುವ ಮೊದಲೇ ಸಂಗ್ರಹಿಸಲ್ಪಡಬೇಕೆಂದು ಮೈಸೂರು ಮಹಾರಾಜ ಶ್ರೀ ಜಯಚಾಮರಾಜ ಒಡೆಯರ್ ಅವರು ಇಂದು ಇಲ್ಲಿ ತಿಳಿಸಿದರು.

ಅಖಿಲ ಕರ್ನಾಟಕ ಪ್ರಥಮ ಜನಪದ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿದ ಶ್ರೀ ಜಯಚಾಮರಾಜ ಒಡೆಯರ್ ಅವರು, ನಮ್ಮ ಹಿಂದಿನವರ ಜೀವನದ ಸಹಜ ಚಿತ್ರವನ್ನು ತನ್ನದೇ ಆದ ರೀತಿಯಲ್ಲಿ ರಂಜನೀಯವಾಗಿ ತಿಳಿಸುವ ಜನಪದ ಗೀತೆಗಳು ಸಂಸ್ಕೃತಿಯನ್ನು ಬೆಳೆಸಿ, ಪೋಷಿಸಿವೆ ಎಂದರು.

ನಗರ ವಾರ್ಸಿಟಿಯಲ್ಲಿ ಇಂದಿನಿಂದ ಐಚ್ಛಿಕ ಶಿಕ್ಷಣ ಮಾಧ್ಯಮ ಕನ್ನಡ

ಬೆಂಗಳೂರು, ಡಿ. 6– ಪ್ರದೇಶ ಭಾಷೆ, ಕನ್ನಡವನ್ನು ಐಚ್ಛಿಕ ಶಿಕ್ಷಣ ಮಾಧ್ಯಮವಾಗಿ ಕಾಲೇಜು ತರಗತಿಗಳಲ್ಲಿ ಅಳವಡಿಸಿಕೊಳ್ಳುವ ಬೆಂಗಳೂರು ವಿಶ್ವವಿದ್ಯಾಲಯದ ನೀತಿ ಇಂದಿನಿಂದ ಅಂಗೀಕೃತ ಧೋರಣೆಯಾಗಿ ಸ್ಥಿರಗೊಳ್ಳುವುದು.

ಶಿಕ್ಷಣ ಮಾಧ್ಯಮದ ಬಗ್ಗೆ ಆಗಾಗ ಉದ್ಭವವಾಗುವ ವಿಭಿನ್ನ ಅಭಿಪ್ರಾಯಗಳು ಹಾಗೂ ಬೇರೆ ಬೇರೆ ರಾಜಕೀಯ ಪ್ರಭಾವಗಳಿಂದ ಹೊಸ ಧೋರಣೆಗೆ ರಕ್ಷೆ ನೀಡಲು ವಿಶ್ವ ವಿದ್ಯಾನಿಲಯದ ಸೆನೆಟ್ ನಿನ್ನೆ ಇದಕ್ಕೆ ಸರ್ವಾನುಮತದ ಒಪ್ಪಿಗೆ ನೀಡಿ ‘ಅಂಗೀಕೃತ ಧೋರಣೆ’ಯೆಂದು ಸ್ವೀಕರಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT