ಗಡ್ಚಿರೋಲಿ (ಮಹಾರಾಷ್ಟ್ರ) (ಪಿಟಿಐ): ಜಿಲ್ಲೆಯಲ್ಲಿ ಪೊಲೀಸರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಐವರು ಮಹಿಳೆಯರು ಸೇರಿದಂತೆ 7 ನಕ್ಸಲರನ್ನು ಹತ್ಯೆ ಮಾಡಲಾಗಿದೆ.
‘ಮಕ್ಕಳ ಸ್ನೇಹಿ’ ಕೋರ್ಟ್
ಹೈದರಾಬಾದ್ (ಪಿಟಿಐ): ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳ ವಿಚಾರಣೆಗೆ ನಗರ ಪೊಲೀಸ್ ವಿಭಾಗದ ‘ಭರೋಸಾ’ ಕೇಂದ್ರವು ಶೀಘ್ರವೇ ವಿಶೇಷ ನ್ಯಾಯಾಲಯವನ್ನು ಆರಂಭಿಸಲಿದೆ.
ಈ ನ್ಯಾಯಾಲಯ ಮಕ್ಕಳ ಸ್ನೇಹಿ ಯಾಗಿ ವರ್ತಿಸಲಿದೆ. ತ್ವರಿತ ವಿಚಾರಣೆ ಮಾತ್ರ ವಲ್ಲದೆ, ಸಂತ್ರಸ್ತರು ಮತ್ತೆ ಶೋಷಣೆಗೆ ಒಳಗಾಗುವ ಪ್ರಮಾಣ ಕಡಿಮೆಗೊಳಿಸುತ್ತದೆ. ನ್ಯಾಯಾಧೀಶರು, ವಕೀಲರ ಬಳಿ ಮಕ್ಕಳು ನಿರಾತಂಕವಾಗಿ ಮಾತನಾಡುವಂತೆನೋಡಿಕೊಳ್ಳಲಿದೆ.
ಗುರು– ಶಿಷ್ಯ ಸಂವಾದ
ಜೈಪುರ (ಪಿಟಿಐ): ಕಾಲೇಜುಗಳಿಗೆ ಸಂಬಂಧಿಸಿದ ತೊಂದರೆಗಳು ಮತ್ತು ಸಮಸ್ಯೆಗಳ ಬಗ್ಗೆ ಉಪನ್ಯಾಸಕರೊಂದಿಗೆ ವಿದ್ಯಾರ್ಥಿಗಳು ಸಂವಾದ ನಡೆಸಲು ಅನುವಾಗುವಂತೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ‘ಗುರು–ಶಿಷ್ಯ’ ಕಾರ್ಯಕ್ರಮ ಜಾರಿಗೆ ತರಲು ರಾಜಸ್ಥಾನ ಸರ್ಕಾರ ನಿರ್ಧರಿಸಿದೆ.
ಶಾಲೆಯಲ್ಲಿ ಸಿ.ಸಿ.ಟಿ.ವಿ
ಕೋಲ್ಕತ್ತಾ (ಪಿಟಿಐ): ವಿದ್ಯಾರ್ಥಿಗಳ ಸುರಕ್ಷೆ ದೃಷ್ಟಿಯಿಂದ 15 ದಿನಗಳೊಳಗೆ ಶಾಲಾ ಕ್ಯಾಂಪಸ್ಗಳಲ್ಲಿ, ಶೌಚಾಲಯವನ್ನು ಬಿಟ್ಟು ಉಳಿದೆಲ್ಲ ಸ್ಥಳಗಳನ್ನೂ ಒಳಗೊಳ್ಳುವಂತೆ ಸಿ.ಸಿ.ಟಿ.ವಿ ಕ್ಯಾಮೆರಾಗಳನ್ನು ಅಳವಡಿಸಬೇಕು ಎಂದು ಸಿಐಎಸ್ಸಿಇ (ಕೌನ್ಸಿಲ್ ಫಾರ್ ದಿ ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಎಕ್ಸಾಮಿನೇಶನ್ಸ್) ತನ್ನ ಅಧೀನಕ್ಕೆ ಒಳಪಟ್ಟ ನಗರದ ಎಲ್ಲ ಶಾಲೆಗಳಿಗೆ ನಿರ್ದೇಶನ ನೀಡಿದೆ.
ನಗರದ ಪ್ರತಿಷ್ಠಿತ ಶಾಲೆಯಲ್ಲಿ ನಾಲ್ಕು ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವುದನ್ನು ಖಂಡಿಸಿ ಪೋಷಕರು ತೀವ್ರ ಪ್ರತಿಭಟನೆ ನಡೆಸುತ್ತಿರುವ ಸಂದರ್ಭದಲ್ಲಿ ಮಂಡಳಿ ಈ ಸೂಚನೆ ನೀಡಿದೆ.
ಮಹಿಳಾ ಮುಖ್ಯಸ್ಥೆ
ನವದೆಹಲಿ (ಪಿಟಿಐ): ದೆಹಲಿ ಸರ್ಕಾರವು ಸಂಸ್ಕೃತ ಅಕಾಡೆಮಿಗೆ, ಇದೇ ಮೊದಲ ಬಾರಿಗೆ ಮಹಿಳೆಯನ್ನು ಮುಖ್ಯಸ್ಥೆಯನ್ನಾಗಿ ನೇಮಿಸಿದೆ. ದೆಹಲಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ಕಾಂತಾ ರಾಣಿ ಭಾಟಿಯಾ ಅವರು ಅಕಾಡೆಮಿಯ ಚುಕ್ಕಾಣಿ ಹಿಡಿದಿದ್ದಾರೆ. ಹಲವು ಮಹಿಳೆ ಯರಿಗೂ ಅಕಾಡೆಮಿಯಲ್ಲಿ ಪ್ರಾತಿನಿಧ್ಯ ನೀಡಲಾಗಿದೆ.
ಕೆಲಸ ಸ್ಥಗಿತ
ಐಜವಾಲ್ (ಪಿಟಿಐ): ಏಳನೇ ವೇತನ ಆಯೋಗದ ಶಿಫಾರಸು ಜಾರಿಗೆ ಒತ್ತಾಯಿಸಿ ರಾಜ್ಯ ಸರ್ಕಾರಿ ನೌಕರರು ಕಚೇರಿ ಕೆಲಸದಿಂದ ದೂರ ಉಳಿದರು. ಇದರಿಂದ ಮಿಜೊರಾಂ ಸರ್ಕಾರದ ಕಾರ್ಯನಿರ್ವಹಣೆ ಮಂಗಳವಾರ ಸಂಪೂರ್ಣ ಸ್ಥಗಿತಗೊಂಡಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.