ನವದೆಹಲಿ: ಸರ್ಕಾರ ನೀಡುವ ವಿವಿಧ ಸೇವೆಗಳಿಗೆ ಆಧಾರ್ ಜೋಡಣೆ ಮಾಡುವ ಗಡುವನ್ನು ಮಾರ್ಚ್ 31ರವರೆಗೆ ವಿಸ್ತರಿಸಲಾಗುವುದು ಎಂದು ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್ನಲ್ಲಿ ಪುನರುಚ್ಚರಿಸಿದೆ. ಈ ಬಗ್ಗೆ ಶುಕ್ರವಾರವೇ ಅಧಿಸೂಚನೆ ಹೊರಡಿಸಲಾಗುವುದು ಎಂದು ಹೇಳಿದೆ.
ಮೊಬೈಲ್ ಸಿಮ್ಗೆ ಆಧಾರ್ ಜೋಡಣೆ ಮಾಡುವುದನ್ನು ಸುಪ್ರೀಂ ಕೋರ್ಟ್ ಕಡ್ಡಾಯ ಮಾಡಿರುವುದರಿಂದ ಅದರ ಗಡುವನ್ನು ವಿಸ್ತರಿಸಲಾಗುವುದಿಲ್ಲ. ಸಿಮ್ಗೆ ಆಧಾರ್ ಜೋಡಣೆ ಮಾಡಲು ಮುಂದಿನ ಫೆಬ್ರುವರಿ 6 ಕೊನೆಯ ದಿನವಾಗಿದೆ ಎಂದು ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್ ಅವರು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಪೀಠಕ್ಕೆ ತಿಳಿಸಿದರು. ಬ್ಯಾಂಕ್ ಖಾತೆ ಮತ್ತು ಪ್ಯಾನ್ ಸಂಖ್ಯೆಗೆ ಆಧಾರ್ ಜೋಡಣೆಗೂ ಇದು ಅನ್ವಯ ಎಂದು ಹೇಳಿದರು.
ವಿವಿಧ ಸೇವೆಗಳಿಗೆ ಆಧಾರ್ ನೋಂದಣಿ ಮಾಡದವರಿಗೆ ಕಿರುಕುಳ ನೀಡುವಂತಹ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ ಎಂದು ಕೇಂದ್ರ ಸರ್ಕಾರ ಭರವಸೆ ಕೊಡಬೇಕು ಎಂದು ಆಧಾರ್ ಯೋಜನೆಯನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿರುವವರ ಪರ ವಾದಿಸುತ್ತಿರುವ ವಕೀಲ ಶ್ಯಾಮ್ ದಿವಾನ್ ಹೇಳಿದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ವೇಣುಗೋಪಾಲ್, ಆಧಾರ್ ನೋಂದಣಿ ಮಾಡಲು ಬಯಸುವವರಿಗೆ ಕಿರುಕುಳ ನೀಡುವಂತಹ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ. ಇವರಿಗೆ ಮುಂದಿನ ಮಾರ್ಚ್ 31ರವರೆಗೆ ಯಾವುದೇ ಸೇವೆಯನ್ನು ನಿರಾಕರಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.
**
ಆಧಾರ್ಗೆ ಕಾನೂನು ಬಲ
* 2016ರಲ್ಲಿ ಸಂಸತ್ತು ಆಧಾರ್ ಕಾಯ್ದೆಗೆ ಅನುಮೋದನೆ ನೀಡಿದೆ. ಬಳಿಕ, ಪಡಿತರ, ಅಡುಗೆ ಅನಿಲ, ನರೇಗಾ, ವಿದ್ಯಾರ್ಥಿವೇತನ ಮತ್ತು ಪಿಂಚಣಿಯಂತಹ ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಆಧಾರ್ ಜೋಡಣೆಯನ್ನು ಸರ್ಕಾರ ಕಡ್ಡಾಯ ಮಾಡಿದೆ
* ಪ್ಯಾನ್ ಕಾರ್ಡ್ಗಳಿಗೆ ಆಧಾರ್ ಜೋಡಣೆ ಕಡ್ಡಾಯಗೊಳಿಸುವುದಕ್ಕಾಗಿ ಆದಾಯ ತೆರಿಗೆ ಕಾಯ್ದೆಗೆ ಇದೇ ಮಾರ್ಚ್ನಲ್ಲಿ ತಿದ್ದುಪಡಿ ಮಾಡಲಾಗಿದೆ
* ಬ್ಯಾಂಕ್ ಖಾತೆ, ವಿಮೆ, ಪಿಂಚಣಿ, ಮ್ಯೂಚುವಲ್ ಫಂಡ್ ಮತ್ತು ಡಿಮ್ಯಾಟ್ ಖಾತೆಗಳಿಗೆ ಆಧಾರ್ ಜೋಡಣೆ ಕಡ್ಡಾಯಗೊಳಿಸುವುದಕ್ಕಾಗಿ ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆಗೆ ಜೂನ್ 1ರಂದು ತಿದ್ದುಪಡಿ ಮಾಡಲಾಗಿದೆ
* ಲೋಕನೀತಿ ಫೌಂಡೇಶನ್ ಸಲ್ಲಿಸಿದ ಅರ್ಜಿ ವಿಚಾರಣೆ ಸಂದರ್ಭದಲ್ಲಿ ಸಿಮ್ ಕಾರ್ಡ್ಗೆ ಆಧಾರ್ ಜೋಡಣೆಯನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ
**
ಯುಐಡಿಎಐ ಭಿನ್ನ ರಾಗ
ಮೊಬೈಲ್ ಸಿಮ್ ಬಿಟ್ಟು ಉಳಿದೆಲ್ಲ ಸೌಲಭ್ಯಗಳಿಗೆ ಆಧಾರ್ ಜೋಡಣೆ ಗಡುವನ್ನು ವಿಸ್ತರಿಸಲಾಗಿದೆ ಎಂದು ಸರ್ಕಾರ ಹೇಳಿದರೂ ವಿಶಿಷ್ಟ ಗುರುತು ಚೀಟಿ ಪ್ರಾಧಿಕಾರ (ಯುಐಡಿಎಐ) ಬೇರೆಯದೇ ಹೇಳಿಕೆ ನೀಡಿದೆ.
ಬ್ಯಾಂಕ್ ಖಾತೆಗಳು, ಪ್ಯಾನ್ ಕಾರ್ಡ್ ಮತ್ತು ಮೊಬೈಲ್ ಸಿಮ್ಗಳಿಗೆ ಆಧಾರ್ ಜೋಡಣೆಯ ಗಡುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಹೇಳಿದೆ.
ಬ್ಯಾಂಕ್ ಖಾತೆ ಮತ್ತು ಆದಾಯ ತೆರಿಗೆ ಶಾಶ್ವತ ಖಾತೆ ಸಂಖ್ಯೆಗೆ (ಪ್ಯಾನ್) ಆಧಾರ್ ಜೋಡಣೆ ಮಾಡಲು ಡಿ. 31 ಮತ್ತು ಸಿಮ್ ಕಾರ್ಡ್ಗಳಿಗೆ ಆಧಾರ್ ಜೋಡಣೆಗೆ ಮುಂದಿನ ಫೆ. 6ರ ಗಡುವು ನಿಗದಿಪಡಿಸಲಾಗಿದೆ.
ವಿವಿಧ ಸೇವೆಗಳಿಗೆ ಆಧಾರ್ ಸಂಖ್ಯೆ ಜೋಡಣೆ ಮಾಡುವುದಕ್ಕೆ ಸುಪ್ರೀಂ ಕೋರ್ಟ್ ಈವರೆಗೆ ತಡೆ ನೀಡಿಲ್ಲ. ತಡೆ ನೀಡಲಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವುದು ಸುಳ್ಳು ಸುದ್ದಿ ಎಂದು ಯುಐಡಿಎಐ ಸ್ಪಷ್ಟಪಡಿಸಿದೆ.
**
ಮುಂದಿನ ವಾರ ವಿಚಾರಣೆ
ಆಧಾರ್ಗೆ ಸಂಬಂಧಿಸಿ ದಾಖಲಾಗಿರುವ ಅರ್ಜಿಗಳ ವಿಚಾರಣೆ ನಡೆಸಲು ಸಂವಿಧಾನ ಪೀಠವನ್ನು ಮುಂದಿನ ವಾರ ರಚಿಸಲಾಗುವುದು. ಮುಂದಿನ ವಾರವೇ ವಿಚಾರಣೆಯೂ ಆರಂಭವಾಗಲಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಸಂವಿಧಾನ ಪೀಠ ರಚಿಸುವುದಾಗಿ ಅಕ್ಟೋಬರ್ 30ರಂದೇ ಸುಪ್ರೀಂ ಕೋರ್ಟ್ ಹೇಳಿತ್ತು. ನವೆಂಬರ್ ಕೊನೆಯ ವಾರದಲ್ಲಿ ವಿಚಾರಣೆ ಆರಂಭಿಸಲಾಗುವುದು ಎಂದೂ ಹೇಳಿತ್ತು. ಆದರೆ ಅದು ಮುಂದೂಡಿಕೆ ಆಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.