ಬೆಂಗಳೂರು: ಸಹೋದ್ಯೋಗಿ ಪತ್ರಕರ್ತನ ಹತ್ಯೆಗೆ ಸುಪಾರಿ ನೀಡಿದ್ದ ಆರೋಪದಡಿ ಬಂಧಿತರಾಗಿರುವ ‘ಹಾಯ್ ಬೆಂಗಳೂರು’ ಪತ್ರಿಕೆ ಸಂಸ್ಥಾಪಕ ರವಿ ಬೆಳಗೆರೆ ಅವರನ್ನು ಸಿಸಿಬಿ ಪೊಲೀಸರು ಶನಿವಾರ ಎರಡು ತಾಸುಗಳ ಕಾಲ ವಿಚಾರಣೆ ನಡೆಸಿದರು.
ಪೊಲೀಸರು ಕೇಳಿದ ಎಲ್ಲ ಪ್ರಶ್ನೆಗಳಿಗೂ ತಾಳ್ಮೆಯಿಂದಲೇ ಬೆಳಗೆರೆ ಅವರು ಉತ್ತರಿಸಿದರು. ಆದರೆ ಸುಪಾರಿ ನೀಡಿದ್ದ ಆರೋಪವನ್ನು ಮಾತ್ರ ತಳ್ಳಿ ಹಾಕಿದರು.
ಉತ್ತರ ಕನ್ನಡ ಜಿಲ್ಲೆ ಜೋಯಿಡಾದಲ್ಲಿರುವ ಬೆಳಗೆರೆ ಅವರ ತೋಟದ ಮನೆ ಹಾಗೂ ಬೆಂಗಳೂರಿನ ರಾಜರಾಜೇಶ್ವರಿನಗರದಲ್ಲಿರುವ ಅವರ ಇನ್ನೊಂದು ಮನೆಯಲ್ಲೂ ಸಿಸಿಬಿ ಪೊಲೀಸರು ಶನಿವಾರ ಪರಿಶೀಲನೆ ನಡೆಸಿ ಮತ್ತಷ್ಟು ಮಾಹಿತಿ ಕಲೆಹಾಕಿದರು.
ಪ್ರಕರಣದ ಮತ್ತೊಬ್ಬ ಆರೋಪಿ ಶಶಿಧರ್ ಮುಂಡೆವಾಡಿಯನ್ನು ಎಸ್ಐಟಿ ಅಧಿಕಾರಿಗಳು ಗೌರಿ ಲಂಕೇಶ್ ಹತ್ಯೆ ಪ್ರಕರಣದ ಕುರಿತಾಗಿ ವಿಚಾರಣೆಗೆ ಒಳಪಡಿಸಿದರು. ಆದರೆ, ಇದುವರೆಗೂ ಯಾವುದೇ ಮಹತ್ವದ ಸುಳಿವು ಲಭ್ಯವಾಗಿಲ್ಲ.
ಮೂಡಿಗೆರೆ ವರದಿ: ‘ನನ್ನ ಮಗ ಸುನೀಲ್ ಹತ್ಯೆ ಮಾಡಲು ರವಿ ಬೆಳಗೆರೆ ಅವರು ಸುಪಾರಿ ನೀಡಿದ್ದಾರೆ ಎಂಬುದನ್ನು ಕನಸಿನಲ್ಲೂ ಕಲ್ಪಿಸಿಕೊಂಡಿರಲಿಲ್ಲ’ ಎಂದು ಸುನೀಲ್ ಹೆಗ್ಗರವಳ್ಳಿ ಅವರ ತಂದೆ ಎಚ್.ಜಿ.ನಂಜೇಗೌಡ ಹೇಳಿದರು.
‘ರವಿ ಬೆಳಗೆರೆ ಹಾಗೂ ಸುನೀಲ್ ನಡುವೆ ಯಾವುದೇ ವೈಷಮ್ಯವಿದ್ದರೂ ಕುಳಿತು ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಬೇಕಿತ್ತು, ಆದರೆ ಅವರು ಹಾಗೆ ಮಾಡಲಿಲ್ಲ’ ಎಂದು ಅವರು ಬೇಸರಿಸಿದರು.