ಯಳಂದೂರು: ಜಿಲ್ಲೆಯಲ್ಲಿ ಯಳಂದೂರು ತಾಲ್ಲೂಕಿನಲ್ಲಿ ಹೆಚ್ಚು ಬಾಲ್ಯ ವಿವಾಹಗಳು ನಡೆಯುತ್ತಿರು ವುದು ಆತಂಕಕಾರಿ ಬೆಳವಣಿಗೆ ಎಂದು ಹೊನ್ನೂರು ಪಿಡಿಒ ಪುಟ್ಟರಾಜು ಆತಂಕ ವ್ಯಕ್ತಪಡಿಸಿದರು.
ತಾಲ್ಲೂಕಿನ ಹೊನ್ನೂರು ಗ್ರಾಮ ಪಂಚಾಯಿತಿ ವತಿಯಿಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣ ದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಮಕ್ಕಳ ವಿಶೇಷ ಗ್ರಾಮಸಭೆಯಲ್ಲಿ ಅವರು ಮಾತನಾಡಿದರು.
ಹಿಂದುಳಿದ ವರ್ಗ ಅದರಲ್ಲೂ ಉಪ್ಪಾರ ಜನಾಂಗದಲ್ಲಿ ಬಾಲ್ಯ ವಿವಾಹಗಳು ನಡೆಯುತ್ತಿವೆ. ಇದರ ನಿಯಂತ್ರಣಕ್ಕಾಗಿ ಪಿಎಂಎಸ್ಆರ್ ಸಂಸ್ಥೆ ಸೇರಿದಂತೆ ಅನೇಕ ಸಂಘ ಸಂಸ್ಥೆಗಳು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿವೆ. ಶಾಲೆಯಲ್ಲೂ ಶಿಕ್ಷಕರು ಮಕ್ಕಳಿಗೆ ಈ ಬಗ್ಗೆ ಅರಿವು ಮೂಡಿಸಬೇಕು ಎಂದರು.
ಶಾಲೆ–1ರಲ್ಲಿ ಶಿಕ್ಷಕರ ಕೊರತೆ ಇದೆ. ಶಾಲೆಯ ಚಾವಣಿಯಲ್ಲಿ ನೀರು ಸೋರುತ್ತಿದೆ. ಶಾಲೆ–2 ರಲ್ಲಿ ಸುತ್ತುಗೋಡೆ ಇಲ್ಲದೆ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ಶಾಲೆಯ ಸುತ್ತಲೂ ತ್ಯಾಜ್ಯ ಸುರಿಯಲಾಗುತ್ತಿದೆ. ಇದರ ಬಗ್ಗೆ ಗ್ರಾಮ ಪಂಚಾಯಿತಿ ವಿಶೇಷ ಕಾಳಜಿ ವಹಿಸಿ ಸಮಸ್ಯೆ ಬಗೆ ಹರಿಸಬೇಕು ಎಂದು ವಿದ್ಯಾರ್ಥಿಗಳಾದ ಮಧು, ಶ್ರೀನಿವಾಸ, ನಿತೀಶ್ ದೂರು ಸಲ್ಲಿಸಿದರು.
ತಾ.ಪಂ ಸದಸ್ಯ ನಿರಂಜನ್, ಗ್ರಾ.ಪಂ ಅಧ್ಯಕ್ಷ ಮಹಾದೇವಸ್ವಾಮಿ, ಉಪಾಧ್ಯಕ್ಷೆ ಗಾಯತ್ರಿ ಸೋಮಶೇಖರ್, ಸದಸ್ಯರಾದ ಆರ್. ಪುಟ್ಟಬಸವಯ್ಯ, ಎಸ್. ಪುಟ್ಟಸ್ವಾಮಿ, ಸಿದ್ದಪ್ಪಸ್ವಾಮಿ, ರಾಜೇಂದ್ರ, ಮುಖಂಡ ಶಾಂತರಾಜು, ಮುಖ್ಯ ಶಿಕ್ಷಕ ರಾಚಪ್ಪ ಇದ್ದರು.