ಬಳ್ಳಾರಿ:‘ ಸಂಘಟನೆ ಬಲವನ್ನು ಮತ್ತಷ್ಟು ಹೆಚ್ಚಿಸಿ, ಹೋರಾಟ ರೂಪಿಸುವ ಅಗತ್ಯವಿದೆ’ ಎಂದು ಸರ್ಕಾರಿ ಎಸ್ಸಿ, ಎಸ್ಟಿ ನೌಕರರ ಸಮನ್ವಯ ರಾಜ್ಯ ಸಮಿತಿಅಧ್ಯಕ್ಷ ಶಿವಶಂಕರಪ್ಪ ಅಭಿಪ್ರಾಯಪಟ್ಟರು.
ನಗರದ ಕೆ.ಇ.ಬಿ.ಫಂಕ್ಷನ್ ಹಾಲ್ನಲ್ಲಿ ಭಾನುವಾರ ಸರ್ಕಾರಿ ಎಸ್ಸಿ, ಎಸ್ಟಿ ನೌಕರರ ಸಮನ್ವಯ ಜಿಲ್ಲಾ ಸಮಿತಿ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ವಿಚಾರ ಸಂಕಿರಣ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಪರಿಶಿಷ್ಟ ಜಾತಿ, ಪಂಗಡ ನೌಕರರ ಮುಂಬಡ್ತಿಯನ್ನು ಜಾರಿಗೊಳಿಸಲು ರಾಷ್ಟ್ರಪತಿ ಅನುಮೋದನೆ ಪಡೆಯಲು ಸಂಸದರು ಒಗ್ಗಟ್ಟು ಪ್ರದರ್ಶಿಸಬೇಕು. ರಾಜ್ಯಸಭೆಯಲ್ಲಿ ಸಂವಿಧಾನದ 117 ನೇ ತಿದ್ದುಪಡಿ ಕಾಯ್ದೆ 2012ರಲ್ಲಿ ಅನುಮೋದನೆಗೊಂಡಿದೆ. ಆದರೆ, ಅದನ್ನು ಲೋಕಸಭೆಯಲ್ಲಿ ಮಂಡಿಸದೆ ವಿಳಂಬ ಮಾಡಲಾಗುತ್ತಿದೆ. ಇದನ್ನು ಆದಷ್ಟು ಬೇಗ ಅನುಮೋದನೆ ಮಾಡಬೇಕು’ ಎಂದು ಒತ್ತಾಯಿಸಿದರು.
‘2011ರ ಜನಗಣತಿ ಅನುಸಾರ ಮೀಸಲಾತಿ ನಿಗದಿಪಡಿಸುವುದು. ಖಾಸಗಿ ಉದ್ಯೋಗ ಕ್ಷೇತ್ರ ಹಾಗೂ ನ್ಯಾಯಾಧೀಶರ ನೇಮಕದಲ್ಲಿ ಮೀಸಲಾತಿ ನೀಡಬೇಕು. ಶಿಕ್ಷಣ,ಉದ್ಯೋಗ, ಮತ್ತು ಮುಂಬಡ್ತಿಯಲ್ಲಿನ ಮೀಸಲಾತಿ ನಿಯಮಗಳನ್ನು ಸಂವಿಧಾನದ ಅನುಚ್ಛೇದ–9ರಲ್ಲಿ ಸೇರಿಸಬೇಕು’ ಎಂದು ಆಗ್ರಹಿಸಿದರು.
ಇದೇ ವೇಳೆಯಲ್ಲಿ ಗಣ್ಯರು ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಿದರು. ‘ಪ್ರಸ್ತುತ ಸಂದರ್ಭದಲ್ಲಿ ಮೀಸಲಾತಿ ಅಗತ್ಯತೆ’ ಕುರಿತ ಕಿರುಹೊತ್ತಿಗೆಯನ್ನು ಬಿ.ಆರ್.ಅಂಬೇಡ್ಕರ್ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎಸ್.ಚಿದಾನಂದಪ್ಪ ಬಿಡುಗಡೆಗೊಳಿಸಿದರು.