ಭದ್ರಾವತಿ: ವಿದ್ಯಾರ್ಥಿಗಳು ತಮ್ಮ ಸುತ್ತಲಿನ ಸಮಾಜದಲ್ಲಿನ ಜನರಿಗೆ ಮಾದಕ ವಸ್ತುಗಳ ದುಷ್ಪರಿಣಾಮ ಕುರಿತು ಮನವರಿಕೆ ಮಾಡಿಕೊಡುವ ಕೆಲಸ ಮಾಡಿಕೊಡಬೇಕು ಎಂದು ಜಿಲ್ಲಾ ನ್ಯಾಯಾಧೀಶ ಆರ್.ಬಿ. ಧರ್ಮಗೌಡರ ಹೇಳಿದರು.
ಕಾನೂನು ಸೇವಾ ಪ್ರಾಧಿಕಾರ ಬುಧವಾರ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಜಿಲ್ಲಾ ಹಾಗೂ ತಾಲ್ಲೂಕು ವಕೀಲರ ಸಂಘದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಮಾದಕ ವಸ್ತುಗಳ ವ್ಯಸನ ಹಾಗೂ ನಿವಾರಣೆ ಜನಜಾಗೃತಿ ಉದ್ಘಾಟಿಸಿ ಮಾತನಾಡಿದರು.
‘ಜಿಲ್ಲೆಯಲ್ಲಿ ಅರಣ್ಯ ಭೂಮಿ ಒತ್ತುವರಿಯಲ್ಲಿ ಬಗರ್ಹುಕುಂ ಸಾಗುವಳಿ ಮಾಡುವ ರೈತರ ಸಂಖ್ಯೆ ಹಚ್ಚಿದೆ. ಆದರೆ ಅನೇಕ ಸಂದರ್ಭದಲ್ಲಿ ತಿಳಿದೋ ತಿಳಿಯದೆಯೋ ಅನೇಕ ಕಡೆ ಗಾಂಜಾ ಬೆಳೆದಿದ್ದು, ಈ ಕುರಿತು ವಿದ್ಯಾರ್ಥಿಗಳು ಜನಜಾಗೃತಿ ಮೂಡಿಸಬೇಕು ಎಂದು ಸಲಹೆ ನೀಡಿದರು.
ಹೊರ ರಾಜ್ಯ, ರಾಷ್ಟ್ರಗಳಿಂದ ಮಾದಕ ವಸ್ತುಗಳು ಅನೇಕ ರೀತಿಯಲ್ಲಿ ಒಳ ಬರುತ್ತಿವೆ. ರಾಷ್ಟ್ರದ ಯುವ ಸಂಪತ್ತು ಇಂತಹ ಅನೈತಿಕ ಚಟುವಟಿಕೆಗೆ ಸಿಲುಕಿದರೆ ಭವಿಷ್ಯದಲ್ಲಿ ಬಹಳಷ್ಟು ಸಮಸ್ಯೆಗಳು ಎದುರಾಗುತ್ತವೆ ಎಂದು ಹೇಳಿದರು.
ಈ ವಿಚಾರಗಳನ್ನು ತಿಳಿಸುವ ನಿಟ್ಟಿನಲ್ಲಿ ಕಾನೂನು ಸೇವಾ ಪ್ರಾಧಿಕಾರ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಜನಜಾಗೃತಿ ರೂಪಿಸುತ್ತಿದ್ದು, ಸಮಾಜದ ಸಹಕಾರ ಅಗತ್ಯ ಎಂದರು.
ನಾಲ್ಕನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯ ನ್ಯಾಯಾಧೀಶ ಗುರುನಾಥ ಶಂಬಾ ರೇವಣಕರ್ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ನ್ಯಾಯಾಧೀಶರಾದ ಸೋಮಶೇಖರ ಸಿ. ಬಾದಾಮಿ, ಅನುಪಮ ಲಕ್ಷ್ಮೀ, ಯು.ಗಣೇಶ ಪಡಿಯಾರ್ ಉಪಸ್ಥಿತರಿದ್ದರು.
ಡಿ.ಎನ್.ಹಾಲಸಿದ್ದಪ್ಪ, ವಿವೇಕ ವಿನ್ಸಂಟ್ ಪಾಯಸ್, ಟಿ. ಚಂದ್ರೇಗೌಡ, ಜಿ. ಆನಂದಕುಮಾರ್, ಶೈಲಜಾ ಹೊಸಳ್ಯಾರ್, ಉದಯಶೆಟ್ಟಿ ಮಾತನಾಡಿದರು.