ಬಾದಾಮಿ: ‘ರಾಜ್ಯದಲ್ಲಿ ನವಕರ್ನಾಟಕ ನಿರ್ಮಾಣಕ್ಕಾಗಿ ಯಾತ್ರೆ ಕೈಗೊಂಡಿದ್ದೇವೆ ಎಂದು ಹೇಳುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಳೆದ ನಾಲ್ಕೂವರೆ ವರ್ಷ ಏನು ಮಾಡಿದ್ದೀರಿ? ನವ ಕರ್ನಾಟಕ ನಿರ್ಮಾಣ ಈಗ ನೆನಪಿಗೆ ಬಂದಿದೆಯಾ’ ಎಂದು ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್ ಪ್ರಶ್ನಿಸಿದರು.
ಇಲ್ಲಿನ ವೀರಪುಲಿಕೇಶಿ ವಿದ್ಯಾ ಸಂಸ್ಥೆಯ ಆವರಣದಲ್ಲಿ ಮಂಗಳವಾರ ಬಿಜೆಪಿ ವತಿಯಿಂದ ಹಮ್ಮಿಕೊಂಡಿದ್ದ ಪರಿವರ್ತನಾ ಯಾತ್ರೆಯ ಬೃಹತ್ ಸಭೆಯಲ್ಲಿ ಮಾತನಾಡಿದ ಅವರು, ‘ಬಿಜೆಪಿ ಕೈಗೊಂಡಿರುವ ಪರಿವರ್ತನಾ ಯಾತ್ರೆಗೆ ಜನಸಾಗರವೇ ಹರಿದು ಬರುತ್ತಿರುವುದನ್ನು ಕಂಡು ಸಿದ್ದರಾಮಯ್ಯಗೆ ಭಯ ಉಂಟಾಗಿದೆ. ಹಾಗಾಗಿ ಅವರು ಯಾತ್ರೆ ಆರಂಭಿಸಿದ್ದಾರೆ’ ಎಂದರು.
‘ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಭ್ರಷ್ಟಾಚಾರ, ಅಧಿಕಾರ ದುರುಪಯೋಗ ಹಾಗೂ ಸ್ವಜನ ಪಕ್ಷಪಾತ ತಾಂಡವವಾಡುತ್ತಿವೆ. ಸಾಮಾನ್ಯರಗೆ ಮರಳು ದೊರೆಯದಂತೆ ಶಾಸಕರು ಮತ್ತು ಅವರ ಮಕ್ಕಳು ಮರಳು ದಂಧೆಯಲ್ಲಿ ತೊಡಗಿ ಲೂಟಿ ಮಾಡುತ್ತಿದ್ದಾರೆ’ ಎಂದರು.
ಸಚಿವ ಎಂ.ಬಿ.ಪಾಟೀಲ ಅವರು ನೀರಾವರಿ ಅಭಿವೃದ್ಧಿ ಮಾಡುವುದನ್ನು ಬಿಟ್ಟು ಲಿಂಗಾಯತ ಧರ್ಮದ ಹೋರಾಟದ ಕೆಲಸ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ನಾನು ಮುಖ್ಯಮಂತ್ರಿ ಇದ್ದಾಗ 43 ಹೊಸ ತಾಲ್ಲೂಕುಗಳನ್ನು ರಚನೆ ಮಾಡಿ 36 ತಾಲ್ಲೂಕು ಆರಂಭಿಸಲು ₹ 80 ಕೋಟಿ ಅನುದಾನವನ್ನು ತೆಗೆದಿರಿಸಿದ್ದೆ. ಕಾಂಗ್ರೆಸ್ ಸರ್ಕಾರ ನಾಲ್ಕುವರೆ ವರ್ಷವಾದರೂ ಹೊಸ ತಾಲ್ಲೂಕುಗಳನ್ನು ಮಾಡಲಿಲ್ಲ. ಜನವರಿ 1ರಿಂದ ಹೊಸ ತಾಲ್ಲೂಕು ಆರಂಭ ಎಂದು ಹೇಳುತ್ತಾರೆ. ಆದರೆ ಮುಂಗಡ ಪತ್ರದಲ್ಲಿ ಹಣವನ್ನೇ ಇಟ್ಟಿಲ್ಲ. ತಾಲ್ಲೂಕುಗಳನ್ನು ಹೇಗೆ ಆರಂಭಿಸುತ್ತಾರೆ ಎಂದು ಶೆಟ್ಟರ್ ಪ್ರಶ್ನಿಸಿದರು.
ಕುಡಿಯುವ ನೀರಿಗಾಗಿ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ಮಲಪ್ರಭೆಗೆ ಮಹಾದಾಯಿ ನದಿ ಜೋಡಣೆ ಬಗ್ಗೆ ಪ್ರಾಮಾಣಿಕ ಪ್ರಯತ್ನ ನಡೆದಿದೆ ಎಂದು ಸ್ಪಷ್ಪಪಡಿಸಿದರು.
ಶಾಸಕ ಗೋವಿಂದ ಕಾರಜೋಳ ಮಾತನಾಡಿ, ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎಂದು ಹೇಳಿ ಸಾಮಾಜಿಕ ನ್ಯಾಯವನ್ನು ಕೊಡದ ಕಾಂಗ್ರೆಸ್ ಮುಖಂಡರು ಮಹಾ ಮೋಸಗಾರರು ಎಂದು ಹೇಳುತ್ತ ‘ನರೇಂದ್ರ ಮೋದಿ ಬಂಗಾರ ಆಗತಾರ, ರಾಹುಲ್ ಗಾಂಧಿ ಬೂದಿ
ಆಗತಾರ’ ಎಂದು ಭವಿಷ್ಯ ನುಡಿದರು.
ಪಕ್ಷದ ಮುಖಂಡರಾದ ಲಕ್ಷ್ಮಣ ಸವದಿ, ಸಿ.ಟಿ. ರವಿ, ಮುರುಗೇಶ ನಿರಾಣಿ, ಪಿ.ಸಿ. ಗದ್ದಿಗೌಡರ, ಶ್ರೀಕಾಂತ ಕುಲಕರ್ಣಿ, ಎಂ.ವಿ. ಬನ್ನಿ, ಎಂ.ಕೆ. ಪಟ್ಟಣಶೆಟ್ಟಿ, ಮಹಾಂತೇಶ ಮಮದಾಪುರ ಮಾತನಾಡಿದರು. ಸಿದ್ದು ಸವದಿ, ದೊಡ್ಡನಗೌಡ ಪಾಟೀಲ, ನಾರಾಯಣಸಾ ಭಾಂಡಗೆ, ಹನುಮಂತ ನಿರಾಣಿ, ಬಿ.ಪಿ. ಹಳ್ಳೂರ, ರವಿಕುಮಾರ, ಶಾಂತಗೌಡ ಪಾಟೀಲ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.