ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದುಷ್ಕರ್ಮಿಗಳನ್ನು ಗಲ್ಲಿಗೇರಿಸಿ: ಎಬಿವಿಪಿ ಆಗ್ರಹ

Last Updated 22 ಡಿಸೆಂಬರ್ 2017, 6:05 IST
ಅಕ್ಷರ ಗಾತ್ರ

ಬಾಗಲಕೋಟೆ: ವಿಜಯಪುರ ನಗರದ ದಲಿತ ವಿದ್ಯಾರ್ಥಿನಿಯೊಬ್ಬಳ ಮೇಲೆ ಅತ್ಯಾಚಾರ ಎಸಗಿ ಹತ್ಯೆಗೈದ ಆರೋಪಿಗಳನ್ನು ಬಂಧಿಸಬೇಕು ಎಂದು ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಜಿಲ್ಲಾ ಘಟಕದಿಂದ ಗುರುವಾರ ಇಲ್ಲಿನ ವಿದ್ಯಾಗಿರಿಯ ಎಂಜಿನಿಯರಿಂಗ್ ಕಾಲೇಜು ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನಾ ಮೆರವಣಿಗೆ ಮೂಲಕ ಆಗಮಿಸಿದ ಸಂಘಟನೆಯ ಕಾರ್ಯಕರ್ತರು ಹಾಗೂ ಕಾಲೇಜು ವಿದ್ಯಾರ್ಥಿಗಳು ಮಾನವ ಸರಪಳಿ ನಿರ್ಮಿಸಿ, ಟೈರ್‌ಗೆ ಬೆಂಕಿ ಹಚ್ಚಿದರು. ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಕೆಲಕಾಲ ವಾಹನ ಸಂಚಾರಕ್ಕೆ ತೊಂದರೆಯುಂಟಾಯಿತು.

‘ವಿಜಯಪುರ ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸುತ್ತಿದ್ದ ಸಂಘಟನೆಯ ಕಾರ್ಯಕರ್ತರ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದು, ಖಂಡನೀಯ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹಾಳಾಗಿದೆ’ ಎಂದು ಆರೋಪಿಸಿದರು ‘ದೆಹಲಿಯಲ್ಲಿ ನಿರ್ಭಯಾ ಮೇಲೆ ನಡೆದ ಘಟನೆ ಮಾದರಿಯಲ್ಲಿ ರಾಜ್ಯದಲ್ಲಿಯೂ ನಡೆದಿರುವುದು ದುರಂತ.

ಅದು ದಲಿತ ಬಾಲಕಿಯ ಮೇಲೆ ನಡೆದಿರುವ ದುಷ್ಕರ್ಮಿಗಳ ಕೃತ್ಯ ಖಂಡನೀಯ. ಸರ್ಕಾರ ತಪ್ಪಿತಸ್ಥರನ್ನು ಗಲ್ಲಿಗೇರಿಸಬೇಕು. ಅಂದಾಗ ಮಾತ್ರ ಸಂತ್ರಸ್ತ ಬಾಲಕಿಯ ಕುಟುಂಬಕ್ಕೆ ನ್ಯಾಯ ದೊರಕಿಸಿದಂತಾಗುತ್ತದೆ’ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

‘ರಾಜ್ಯದಲ್ಲಿ ಮಹಿಳೆಯರಿಗೆ ಸೂಕ್ತ ರಕ್ಷಣೆ ಇಲ್ಲದಂತಾಗಿದೆ. ಮುಖ್ಯಮಂತ್ರಿಗಳು ನಮಗೆ ಮಾಸ್ಕ್ ಭಾಗ್ಯ ಕರುಣಿಸಿ ನಾವು ಅದನ್ನು ಹಾಕಿಕೊಂಡು ಓಡಾಡುತ್ತೇವೆ. ರಾಜ್ಯದಲ್ಲಿ ಮಹಿಳೆಯರಿಗೆ ಸ್ವಾತಂತ್ರ್ಯ ಇಲ್ಲದಂತಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮುಧೋಳದಲ್ಲಿ ಪ್ರತಿಭಟನೆ ಜಾಥಾ

ಮುಧೋಳ: ವಿಜಯಪುರದಲ್ಲಿ ನಡೆದ ಅತ್ಯಾಚಾರ ಪ್ರಕರಣ ಖಂಡಿಸಿ ಎಬಿವಿಪಿ ಮುಖಂಡರು ಗುರುವಾರ ಪ್ರತಿಭಟನೆ ನಡೆಸಿದರು. ಗುರುವಾರ ನಗರದ ಪ್ರಮುಖ ರಸ್ತೆಯಲ್ಲಿ ಪ್ರತಿಭಟನೆ ಮೆರವಣಿಗೆ ನಡೆಸಿದ ಅವರು ರಾಜ್ಯ ಸರ್ಕಾರ ಹಾಗೂ ಪೊಲೀಸ್‌ ವ್ಯವಸ್ಥೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಎಬಿವಿಪಿ ತಾಲ್ಲೂಕು ಸಂಚಾಲಕ ಶಿವು ಕಾಂಬಳೆ ಮಾತನಾಡಿ,  ರಾಜ್ಯದಲ್ಲಿ ಮಹಿಳೆಯರಿಗೆ ರಕ್ಷಣೆ ನೀಡುವುಲ್ಲಿ ಸರ್ಕಾರ ವಿಫಲವಾಗಿದೆ. ಪೊಲೀಸರನ್ನು ಬಳಿಸಿ ವಿದ್ಯಾರ್ಥಿ ಕಾರ್ಯಕರ್ತರನ್ನು ಹತ್ತಿಕ್ಕುವ ಕಾರ್ಯ ನಡೆದಿದೆ ಎಂದು ದೂರಿದರು.

ವಿದ್ಯಾರ್ಥಿಗಳಾದ ಜ್ಯೋತಿ ಸರವರ, ಪ್ರೀಯಾಂಕಾ, ಗೀತಾ ಬೂದಿ, ಮಂಜುಳಾ ಸಿರಗಾವಿ, ಶೀಲಾ, ನಿವೇದಿತಾ ನಾವಿ, ಲಕ್ಷ್ಮೀ ಮಾದರ, ದೀಪಾ ನಾವಿ ಹಾಗೂ ಯಲ್ಲಪ್ಪ ಹೆಗಡೆ ಮಾತನಾಡಿದರು. ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷ ಮುತ್ತಪ್ಪ ಕೋಮಾರ ಮಾತನಾಡಿ ಹೋರಾಟದ ಮನವಿ ಸ್ವೀಕರಿಸಲು ತಹಶೀಲ್ದಾರ್ ಕಚೇರಿಯಲ್ಲಿ ಯಾರೂ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವೀರ ಸಾವರ ಪ್ರತಿಷ್ಠಾನದ ಅಧ್ಯಕ್ಷ ಸದಾ ಜಾಧವ, ಸುನೀಲ ನಿಂಬಾಳಕರ, ಹಿಂದೂ ಜಾಗರಣ ವೇದಿಕೆಯ ಪರಸು ನಿಗಡೆ, ಎಬಿವಿಪಿ ತಾಲ್ಲೂಕು ಉಪಾಧ್ಯಕ್ಷ ಉಪನ್ಯಾಸಕ ಸತೀಶ ಸಾರವಾಡ, ಮುಖಂಡರಾದ ಕಲ್ಲಪ್ಪ ಬಾರ್ಕಿ, ಅನೀಲ ಚಿಪ್ಪಲಕಟ್ಟಿ, ಸಾಗರ ರಜಪುತ, ಸಂತೋಷ ಬಂಡಿವಡ್ಡರ ಹಾಜರಿದ್ದರು.

ಉಗ್ರ ಶಿಕ್ಷೆ ನೀಡಿ

ನಾಗರಿಕ ಸಮಾಜ ತಲೆ ತಗ್ಗುವಂತೆ ಮಾಡಿದ ತಪ್ಪಿತಸ್ಥರಿಗೆ ಉಗ್ರ ಶಿಕ್ಷ ನೀಡಬೇಕು ಎಂದು ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಪ್ರದೀಪ ನಿಂಬಾಳಕರ ಹೇಳಿದರು. ನಗರದ ಗಾಂಧಿ ವೃತ್ತದಲ್ಲಿ ಬಾಲಕಿ ದಾನಮ್ಮ ಅತ್ಯಾಚಾರ ಹಾಗೂ ಕೊಲೆ ಖಂಡಿಸಿ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಮಾತನಾಡಿದರು. ಮುಖಂಡರಾದ ತುಷಾರ ಭೂಪಳೆ, ಕುಮಾರ ಪಮ್ಮಾರ, ವಿನಾಯಕ ಪಿಸೆ , ಮಹಾಲಿಂಗ ಮುಂಡಗನೂರ, ಸಚೀನ ಕುಡೆ, ರಾಮ ಮಡಿವಾಳರ, ಅವಿನಾಶ ಚಂದನಶಿವ, ಗುರು ಭಾಗವಹಿಸಿದ್ದರು.

ಬಾದಾಮಿಯಲ್ಲಿ ಪ್ರತಿಭಟನೆ 
ಬಾದಾಮಿ: ಘಟನೆ ಖಂಡಿಸಿ ಎಬಿವಿಪಿ ಕಾರ್ಯಕರ್ತರು ಗುರುವಾರ ಪ್ರತಿಭಟನೆ ನಡೆಸಿ ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು. ಪಟ್ಟಣದ ಮುಖ್ಯ ಬೀದಿಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ, ವೀರಪುಲಿಕೇಶಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಾಣ ಮಾಡುವ ಮೂಲಕ ರಸ್ತೆ ತಡೆ ನಡೆಸಿದರು. ಆರೋಪಿಗಳ ಬಂಧನಕ್ಕೆ ಒತ್ತಾಯಿಸಿದರು.

ನಗರ ಕಾರ್ಯದರ್ಶಿ ರವಿ ವಡ್ಡರ, ರಿಯಾಜ್‌ ಹೊಂಡದಕಟ್ಟಿ, ಪುನೀತ ಮಡಿವಾಳರ, ನವೀನ ಗೌಡರ, ಫಕೀರಪ್ಪ ಅಮರಗೋಳ, ವೆಂಕಟೇಶ್‌ ಅರಹುಣಸಿ, ಪ್ರಜ್ವಲ ವಡ್ಡರ, ಬಾಲಪ್ಪ ಮಾದರ, ಮೋಹನ ಚಳಗೇರಿ, ಶಿವು ಕೋತಿನ, ಚಂದ್ರು ಗೊರಕೊಪ್ಪ, ಮಲ್ಲು ಗೊರಕೊಪ್ಪ, ಸಂದೀಪ ಕಲಾಲ, ಶ್ರೀನಿವಾಸ ರೋಣದ, ಕೃಷ್ಣ ಹಂಡಿ ಸೇರಿದಂತೆ ಅನೇಕರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT