ಹೂವಿನಹಡಗಲಿ: ‘ಕಲಿಕೆಯಲ್ಲಿ ಹಿಂದುಳಿದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ವಿಶೇಷ ತರಗತಿಗಳನ್ನು ಆಯೋಜಿಸಿ ಅವರನ್ನು ಮುಖ್ಯ ವಾಹಿನಿಗೆ ತರಬೇಕು’ ಎಂದು ತಹಶೀಲ್ದಾರ್ ಕೆ.ರಾಘವೇಂದ್ರ ರಾವ್ ಸೂಚಿಸಿದರು. ತಾಲ್ಲೂಕಿನ ನಾಗತಿಬಸಾಪುರ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಗುರುವಾರ ಆಯೋಜಿಸಿದ್ದ ಸಮಾಜ ವಿಜ್ಞಾನ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
‘ಎಸ್ಸೆಸ್ಸೆಲ್ಸಿಯಲ್ಲಿ ಈ ಬಾರಿ ಅತ್ಯುತ್ತಮ ಫಲಿತಾಂಶ ನಿರೀಕ್ಷೆಯಲ್ಲಿದ್ದೇವೆ. ತಾಲ್ಲೂಕು ಆಡಳಿತ ಎಲ್ಲ ರೀತಿಯ ನೆರವು ನೀಡಲು ಸಿದ್ದವಿದ್ದು, ಫಲಿತಾಂಶ ಸುಧಾರಣೆಯತ್ತ ಶಿಕ್ಷಕರು ಗಮನಹರಿಸಬೇಕು. ಗುಂಪು ಅಧ್ಯಯನ, ವಿಶೇಷ ತರಗತಿಗಳನ್ನು ಸಂಘಟಿಸಬೇಕು’ ಎಂದು ತಿಳಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಕೆ.ಚಂದ್ರಪ್ಪ ಮಾತನಾಡಿ, ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯ ರೂಪುಗೊಳ್ಳುವಲ್ಲಿ ಎಸ್ಸೆಸ್ಸೆಲ್ಸಿಯು ಮಹತ್ವದ ಘಟ್ಟವಾಗಿದೆ. ಫಲಿತಾಂಶ ಸುಧಾರಣೆಗೆ ಶಿಕ್ಷಕರು ಶ್ರಮಿಸಬೇಕಿದೆ. ವಿಷಯವಾರು ಉತ್ತಮ ಫಲಿತಾಂಶ ಪಡೆಯುವ ಶಿಕ್ಷಕರಿಗೆ ತಾಲ್ಲೂಕು ಆಡಳಿತದಿಂದ ಸನ್ಮಾನಿಸುತ್ತೇವೆ ಎಂದು ಹೇಳಿದರು.
ಮುಖ್ಯ ಶಿಕ್ಷಕ ಕೆ.ಹನುಮಂತಪ್ಪ ಅಧ್ಯಕ್ಷತೆ ವಹಿಸಿದ್ದರು. ಎಸ್ಡಿಎಂಸಿ ಅಧ್ಯಕ್ಷ ರೇವಣಸಿದ್ದನಗೌಡ ಪಾಟೀಲ, ಎಂ.ಪಿ.ಎಂ. ಅಶೋಕ, ಕಾಳಪ್ಪ, ಸಂಪನ್ಮೂಲ ವ್ಯಕ್ತಿಗಳಾದ ಮಧುಸೂದನ, ಯಲ್ಲಪ್ಪ ಹಂದ್ರಾಳ, ಬಸವರಾಜ ಹಿರೇಮಠ, ಶಿಕ್ಷಕರಾದ ರಾಘವೇಂದ್ರ ಪಾಟೀಲ್, ಶ್ರೀನಿವಾಸ, ಶ್ರೀಲತಾ ಇದ್ದರು.