ಸೋಮವಾರಪೇಟೆ: ಸಮೀಪದ ಡ್ಯೂಕ್ಸ್ ಕ್ಲಬ್ ಹಾಗೂ ಒಎಲ್ವಿ ಕಾನ್ವೆಂಟ್ಗೆ ತೆರಳುವ ಮಾರ್ಗದಲ್ಲಿ ಪ್ರಾರಂಭವಾಗಿರುವ ಎಂಎಸ್ಐಎಲ್ ಮದ್ಯದಂಗಡಿ ತೆರವಿಗೆ ಒತ್ತಾಯಿಸಿ ಸಾರ್ವಜನಿಕರು ಶುಕ್ರವಾರ ಪ್ರತಿಭಟನೆ ನಡೆಸಿದರು.
ಚೌಡ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಡ್ಯೂಕ್ಸ್ ಕ್ಲಬ್ ಸಮೀಪ ಮದ್ಯದಂಗಡಿಯನ್ನು ಪ್ರಾರಂಭಿಸಿದ್ದು, ಈ ಹಿಂದೆ ಸಾರ್ವಜನಿಕರು ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಆದರೆ, ಮತ್ತೊಮ್ಮೆ ಅಂಗಡಿಯನ್ನು ಡಿ.21ರಂದ ಪ್ರಾರಂಭಿಸಲಾಗಿದ್ದು, ಇಂದು ಅಂಗಡಿಗೆ ತೆರಳಿದ ಸ್ಥಳೀಯ ಜನಪ್ರತಿನಿಧಿಗಳೂ, ಸಂಘ ಸಂಸ್ಥೆಯ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಬಾಗಿಲು ಮುಚ್ಚಿಸಲು ಯಶಸ್ವಿಯಾಗಿದರು.
ಜಿಲ್ಲಾ ಪಂಚಾಯಿತಿ ಸದಸ್ಯೆ ಪೂರ್ಣಿಮಾ ಗೋಪಾಲ್, ಚೌಡ್ಲು ಗ್ರಾಮ ಪಂಚಾಯಿತಿ ಅಧ್ಯಕ್ಷೆ ವನಜಾ, ಹಾನಗಲ್ಲು ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೇಣುಕಾ, ಉಪಾಧ್ಯಕ್ಷ ಮಿಥುನ್, ಬೇಳೂರು ಗ್ರಾಮ ಪಂಚಾಯಿತಿ ಸದಸ್ಯ ಕೆ.ಎ.ಯಾಕೂಬ್ ಹಲವರು ಸ್ಥಳದಲ್ಲಿದ್ದು, ಮದ್ಯದಂಗಡಿ ಎದುರು ಧರಣಿ ನಡೆಸಿದರು.
ಅಂಜನೇಯ ದೇವಾಲಯ, ಒಎಲ್ವಿ ಹಾಗೂ ಜ್ಞಾನ ವಿಕಾಸ ಶಾಲೆಗಳ ಸಮೀಪವೇ ಮದ್ಯದಂಗಡಿ ತೆರೆಯುತ್ತಿರುವುದರಿಂದ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ತೊಂದರೆಯಾಗಲಿದೆ. ಆದ್ದರಿಂದ ತಕ್ಷಣ ಅಂಗಡಿಯನ್ನು ತೆರವುಗೊಳಿಸಿ ಎಂದು ಸ್ಥಳದಲ್ಲಿದ್ದ ಅಬಕಾರಿ ಅಧಿಕಾರಿಗಳನ್ನು ಸಾರ್ವಜನಿಕರು ಒತ್ತಾಯಿಸಿದರು. ಅಧಿಕಾರಿಗಳು ಯಾವುದೇ ಕ್ರಮಕ್ಕೆ ಮುಂದಾಗದ ಹಿನ್ನೆಲೆಯಲ್ಲಿ ಸ್ಥಳದಲೇ ಧರಣಿ ನಡೆಸಿ, ಮಧ್ಯಾಹ್ನ ಅಲ್ಲಿಯೇ ಅಡುಗೆ ತಯಾರಿಸಿ ಪ್ರತಿಭಟನಾಕಾರರು ಊಟ ಮಾಡಿದರು.
ಅಬಕಾರಿ ಜಿಲ್ಲಾಧಿಕಾರಿ ಸ್ಥಳಕ್ಕೆ ಬರುವಂತೆ ಪಟ್ಟು ಪ್ರತಿಭಟನಾಕಾರರು ಪಟ್ಟು ಹಿಡಿದರು. ಬೇರೆಡೆ ಕಟ್ಟಡ ಸಿಕ್ಕಿದ ತಕ್ಷಣ ಸ್ಥಳಾಂತರಿಸಲಾಗುವುದು ಎಂದು ಅಬಕಾರಿ ಇನ್ಸ್ಪೆಕ್ಟರ್ ನಟರಾಜ್ ಭರವಸೆ ನೀಡಿದರು. ಸ್ಥಳಾಂತರದ ಬಗ್ಗೆ ಇಲಾಖೆಯಿಂದ ಲಿಖಿತವಾಗಿ ನೀಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದರು.
ಮದ್ಯದಂಗಡಿ ತೆರೆಯಲು ಸರ್ಕಾರ ಅನುಮತಿ ನೀಡಿದೆ. ಸರ್ಕಾರದ ನಿಯಮದಂತೆ ಮದ್ಯದಂಗಡಿ ತೆರಯಲಾಗಿದೆ. ಇಲ್ಲಿ ಮದ್ಯವನ್ನು ಖರೀದಿಸಬಹುದು ಆದರೆ, ಕುಡಿಯಲು ಅವಕಾಶವಿಲ್ಲ ಎಂದು ಎಂಎಸ್ಐಎಲ್ನ ಜಿಲ್ಲಾ ಸಂಪರ್ಕಧಿಕಾರಿ ಕೆಂಪಯ್ಯ ತಿಳಿಸಿದರು. ಅಧಿಕಾರಿಯಿಂದ ಭರವಸೆ ಸಿಕ್ಕದ ಹಿನ್ನೆಲೆ ಪ್ರತಿಭಟನಾಕಾರರು ಧರಣಿ ರಾತ್ರಿಯೂ ಮುಂದುವರಿಸಿದ್ದು ಸ್ಥಳದಲ್ಲಿ ಬಿಗುವಿನ ವಾತಾವರಣವಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.