ಮುಂಬೈ: ಮುಂಬೈನ ಕಮಲಾ ಮಿಲ್ಸ್ ಕಾಂಪೌಂಡ್ ಪ್ರದೇಶದ ಬಹುಮಹಡಿ ಕಟ್ಟಡದಲ್ಲಿ ಗುರುವಾರ ರಾತ್ರಿ ಸಂಭವಿಸಿದ ಅಗ್ನಿ ಅವಘಡಕ್ಕೆ ಸಂಬಂಧಿಸಿ ಬ್ರಹನ್ಮುಂಬೈ ಪುರಸಭೆ ನಿಗಮದ (ಬಿಎಂಸಿ) ಐವರು ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಅಲ್ಲದೆ, ವಾರ್ಡ್ನ ಸಹಾಯಕ ಆಯುಕ್ತರನ್ನು ವರ್ಗಾವಣೆ ಮಾಡಲಾಗಿದೆ.
ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ರಾಮನಾಥ ಕೋವಿಂದ್, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ದುರಂತದ ಬಗ್ಗೆ ಸಂತಾಪ ಸೂಚಿಸಿ ಟ್ವೀಟ್ ಮಾಡಿದ್ದಾರೆ.
ದುರಂತಕ್ಕೀಡಾದ ಕಟ್ಟಡದಲ್ಲಿ ನಿಯಮಗಳನ್ನು ಉಲ್ಲಂಘಿಸಲಾಗಿತ್ತು ಎಂದು ಮೂಲಗಳು ತಿಳಿಸಿವೆ. ಕಟ್ಟಡದಲ್ಲಿದ್ದ ಬೆಂಕಿ ನಂದಿಸುವ ಪರಿಕರಗಳು ಸುಸ್ಥಿತಿಯಲ್ಲಿರಲಿಲ್ಲ. ಬಿಕ್ಕಟ್ಟು ನಿರ್ವಹಿಸುವ ವಿಷಯದಲ್ಲಿ ಅಲ್ಲಿನ ಸಿಬ್ಬಂದಿಗೆ ಸಮರ್ಪಕ ತರಬೇತಿ ಇರಲಿಲ್ಲ ಎನ್ನಲಾಗಿದೆ.
ಕಟ್ಟಡದ ಮಾಲೀಕರು ಮತ್ತು ಮ್ಯಾನೇಜರ್ಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಅವರು ತಲೆಮರೆಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಗುರುವಾರ ರಾತ್ರಿ ಸಂಭವಿಸಿದ ಅಗ್ನಿ ದುರಂತದಲ್ಲಿ ಕನಿಷ್ಠ 14 ಮಂದಿ ಮೃತಪಟ್ಟಿದ್ದಾರೆ. ಇದರಲ್ಲಿ 28ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದ ಮಹಿಳೆಯೊಬ್ಬರೂ ಸೇರಿದ್ದಾರೆ.