ತುಮಕೂರು: ರಾಷ್ಟ್ರ ಕಂಡ ಸರ್ವಶ್ರೇಷ್ಠ ಕವಿಗಳಲ್ಲಿ ಕುವೆಂಪು ಅವರು ಒಬ್ಬರಾಗಿದ್ದಾರೆ ಎಂದು ಶಾಸಕ ರಫೀಕ್ ಅಹಮದ್ ಹೇಳಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಶುಕ್ರವಾರ ಕುವೆಂಪು ಜನ್ಮ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ‘ವಿಶ್ವ ಮಾನವ ದಿನಾಚರಣೆ’ಯಲ್ಲಿ ಮಾತನಾಡಿದರು.
ಕುವೆಂಪು ಅವರು ತಮ್ಮ ಹಲವಾರು ಕೃತಿಗಳಲ್ಲಿ ವಿಶ್ವ ಮಾನವ ತತ್ವಗಳನ್ನು ಬಿತ್ತಿದ್ದಾರೆ. ಕನ್ನಡ ನಾಡಿಗೆ ಸುಂದರವಾದ ನಾಡಗೀತೆಯನ್ನು ಕೊಡುಗೆ ನೀಡಿದ್ದಾರೆ. ಎಲ್ಲ ಸಮುದಾಯದವರು ಒಂದೇ ಎನ್ನುವ ಮಾತನ್ನು ಕೂಡ ಹೇಳಿದ್ದಾರೆ ಎಂದು ತಿಳಿಸಿದರು.
ರಾಷ್ಟ್ರಕವಿ ಕುವೆಂಪು ಅವರು ರಚಿಸಿರುವ ವಿಶ್ವದರ್ಜೆಯ ಸಾಹಿತ್ಯವನ್ನು ಪ್ರತಿಯೊಬ್ಬರು ಓದುವ ಮೂಲಕ ಆರೋಗ್ಯ ಪೂರ್ಣವಾದ ಸಮಾಜವನ್ನು ಸೃಷ್ಟಿಸಲು ಸಾಧ್ಯ. ಅದು ಈಗಿನ ಅವಶ್ಯಕತೆಯಾಗಿದೆ ಎಂದು ಹೇಳಿದರು.
ಕೇಂದ್ರ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಡಾ.ಲಕ್ಷ್ಮಣ್ ದಾಸ್ ಮಾತನಾಡಿ, ‘ಇಂಗ್ಲಿಷ್ ಭಾಷೆಯಲ್ಲಿ ಬರವಣಿಗೆ ಆರಂಭಿಸಿದ ಕುವೆಂಪು ಅವರು ನಂತರ ಕನ್ನಡದಲ್ಲಿ ಬರೆಯತೊಡಗಿ ಕನ್ನಡ ಸಾರಸ್ವತ ಲೋಕಕ್ಕೆ ಮಹತ್ವದ ಕೊಡುಗೆಗಳನ್ನು ನೀಡಿದ್ದಾರೆ. 23 ಕವನ ಸಂಕಲನಗಳು, 8 ನಾಟಕಗಳು, ಎರಡು ಕಾದಂಬರಿಗಳು ಮತ್ತು ರಾಮಾಯಣ ದರ್ಶನಂನಂತಹ ಒಂದು ಮಹಾಕಾವ್ಯವನ್ನು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ನೀಡಿದ್ದಾರೆ’ ಎಂದರು.
‘ಅವರ ಕೃತಿಗಳಲ್ಲಿ ಅಸಮಾನತೆಯನ್ನು ವಿರೋಧಿಸುತ್ತಿದ್ದ ಅವರು, ವಿಶ್ವ ಮಾನವ ಗುಣಗಳನ್ನು ಬಿಂಬಿಸುವಂತೆ ಬರೆಯುತ್ತಿದ್ದರು. ಹೀಗಾಗಿಯೇ ಅವರು ‘ಜಲಗಾರ’ದಂತಹ ನಾಟಕಗಳಲ್ಲಿ ಶ್ರಮಿಕ ವರ್ಗದವರ ಪರವಾಗಿ ಬರೆದಿದ್ದಾರೆ’ ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಕೆ.ಪಿ.ಮೋಹನ್ರಾಜ್ ಮಾತನಾಡಿ, ‘ಬಸವಣ್ಣ ಮತ್ತು ಕುವೆಂಪು ಅವರಂತಹ ಮಹಾನ್ ವ್ಯಕ್ತಿಗಳು ಕನ್ನಡ ನಾಡಿನ ಅಸ್ಮಿತೆಯಾಗಿದ್ದಾರೆ. ಕರ್ನಾಟಕದ ಹಿರಿಮೆಯನ್ನು ಜಗತ್ತಿನಾದ್ಯಂತ ಸಾರಿದ್ದಾರೆ’ ಎಂದು ಹೇಳಿದರು.
‘ದೇಶದ ಉತ್ತರದಲ್ಲಿರುವ ಹಿಮಾಲಯ ಪರ್ವತವು ಯಾವ ರೀತಿಯ ನಯನ ಮನೋಹರ ನಿಸರ್ಗ ಸಹಜತೆಯಿಂದ ಕಂಗೊಳಿಸುತ್ತದೆಯೋ ಅದೇ ರೀತಿ ಮಲೆನಾಡು ಕೂಡ ತನ್ನ ಸೌಂದರ್ಯದಿಂದ ಎಂತಹವರನ್ನಾದರೂ ಮಂತ್ರ ಮುಗ್ಧರನ್ನಾಗಿಸುತ್ತದೆ. ಕುವೆಂಪು ಅವರು ಈ ನಿಸರ್ಗದ ರಮಣಿಯತೆಯನ್ನು ತಮ್ಮ ಬರಹಗಳಲ್ಲಿ ಅಷ್ಟೇ ಸುಂದರವಾಗಿ ಚಿತ್ರಿಸಿದ್ದಾರೆ’ ಎಂದು ತಿಳಿಸಿದರು.
ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಮಂಜುನಾಥ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಸವರಾಜ ಆಪಿನಕಟ್ಟೆ, ಜಿಲ್ಲಾ ಪಂಚಾಯಿತಿ ಯೋಜನಾಧಿಕಾರಿ ಬಾಲರಾಜ್, ಲೇಖಕಿ ಅನ್ನಪೂರ್ಣ ವೆಂಕಟನಂಜಪ್ಪ ಇದ್ದ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.