ಮುಳಬಾಗಿಲು: ‘ಕುವೆಂಪು ಅವರ ಸಾಹಿತ್ಯ ರಚನೆ ಸಾರ್ವಕಾಲಿಕವಾಗಿದ್ದು, ಇವರ ಸಾಹಿತ್ಯಕ್ಕೆ ಸಮಾಜದಲ್ಲಿ ಉತ್ತಮ ಸ್ಥಾನಮಾನ ದೊರೆತಿದೆ’ ಎಂದು ಮುಖಂಡ ಎಂ.ಎಸ್.ಶ್ರೀನಿವಾಸರೆಡ್ಡಿ ಹೇಳಿದರು.
ನಗರದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ರಾಷ್ಟ್ರ ಕವಿ ಕುವೆಂಪು ಅವರ ಜನ್ಮ ದಿನಾಚರಣಾ ಕಾರ್ಯಕ್ರಮದಲ್ಲಿ
ಮಾತನಾಡಿದರು.
ಕುವೆಂಪು ಅವರು ಸರ್ವರಿಗೆ ಸಮಪಾಲು, ಸರ್ವರಿಗೆ ಸಮಬಾಳು ಎಂಬ ಘೋಷ ವಾಕ್ಯವನ್ನು ತಿಳಿಸಿಕೊಟ್ಟಿದ್ದಾರೆ. ಸಮಾಜದ ಎಲ್ಲ ಕ್ಷೇತ್ರಗಳಲ್ಲಿ ತಮ್ಮದೆ ಆದ ಛಾಪು ಮೂಡಿಸಿ, ವಿಭಿನ್ನವಾದ ಪ್ರಭಾವ ಬೀರಿದ್ದಾರೆ ಎಂದರು.
ಜನ ಸಾಮಾನ್ಯರ ಬದುಕು, ಜೀವನ ಶೈಲಿ ಕಟ್ಟಿಕೊಡುವಂತಹ ವಿಶಿಷ್ಟ ಸಾಹಿತ್ಯವನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡಿದ್ದಾರೆ. ಜತೆಗೆ ವಿಶ್ವ ಮಾನವ ಸಂದೇಶ ತಿಳಿಸಿಕೊಟ್ಟ ಮಹಾನ್ ಚೇತನ ಕುವೆಂಪು ಅವರು ಎಂದು ಸಂತಸ ವ್ಯಕ್ತಪಡಿಸಿದರು.
ಪಠ್ಯ ವಿಷಯಗಳ ಜತೆಗೆ ಶಾಲಾ ಕಾಲೇಜು ಮಟ್ಟದಿಂದಲೇ ಶಿಕ್ಷಕ ಮತ್ತು ಉಪನ್ಯಾಸಕರು ಕುವೆಂಪು ಅವರ ಸಾಹಿತ್ಯ ವಿಚಾರ ಧಾರೆಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಿಕೊಡಬೇಕು. ಇದರಿಂದ ವಿದ್ಯಾರ್ಥಿಗಳಲ್ಲಿಯೂ ಸಾಹಿತ್ಯ ಪ್ರೇಮ ಬೆಳೆಯಲು ಅನುಕೂಲವಾಗುತ್ತದೆ ಎಂದು ತಿಳಿಸಿದರು.
ಸಾಹಿತ್ಯ ಎಂಬುದು ಹರಿಯುವ ನೀರು ಇದ್ದಂತೆ. ಪೀಳಿಗೆಯಿಂದ ಪೀಳಿಗೆಗೆ ಹರಿದು ಬರುವಂತಹ ಸಾಹಿತ್ಯ ಕೃಷಿಯಲ್ಲಿ ಎಲ್ಲ ವಿದ್ಯಾರ್ಥಿಗಳು ಸಕ್ರಿಯವಾಗಿ ತೊಡಗಿಸಿಕೊಳ್ಳುವುದರಿಂದ ಹೆಚ್ಚಿನ ಜ್ಞಾನವನ್ನು ಸಂಪಾದಿಸಿಕೊಳ್ಳಬಹುದು ಎಂದು ಅಭಿಪ್ರಾಯಪಟ್ಟರು.