ತರೀಕೆರೆ: ತಾಲ್ಲೂಕಿನ ಅಜ್ಜಂಪುರ, ಮಲ್ಲೇನಹಳ್ಳಿ, ಕುಡ್ಲೂರು, ಬಾವಿಕೆರೆ, ಕರಕುಚ್ಚಿ, ಶಿವನಿ, ಮುಡುಗೋಡು ಗ್ರಾಮಗಳಿಗೆ ₹2.10 ಕೋಟಿ ವೆಚ್ಚದಲ್ಲಿ ಐಎಎನ್ಎಂ ವಸತಿ ಗೃಹಗಳನ್ನು ನಿರ್ಮಿಸಲಾಗುವುದು ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ಭರವಸೆ ನೀಡಿದರು.
ತಾಲ್ಲೂಕಿನ ಅಮೃತಾಪುರ ಹೋಬಳಿಯ ಶಿವಪುರ ಸಮೀಪದ ಕೆ.ಗೊಲ್ಲರಹಳ್ಳಿ ಗ್ರಾಮದಲ್ಲಿ ₹35 ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಡಾಂಬರೀಕರಣ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.
‘ತಾಲೂಕಿನ 35 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದು, ಈ ಗ್ರಾಮಗಳಿಗೆ ಕುಡಿಯುವ ನೀರಿನ ಶಾಶ್ವತ ಯೋಜನೆಗೆ ಕ್ರಮ ಕೈಗೊಳ್ಳಲಾಗುವುದು. ತಾತ್ಕಾಲಿಕವಾಗಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುವುದು’ ಎಂದರು.
ಪುರಸಭಾ ಮಾಜಿ ಅಧ್ಯಕ್ಷ ಬಸವರಾಜ್ ಮಾತನಾಡಿ, ‘ಅಜ್ಜಂಪುರ ತಾಲ್ಲೂಕಿಗೆ ಸೇರಿಸಿರುವ ಕೆ.ಗೊಲ್ಲರಹಳ್ಳಿ ಗ್ರಾಮವನ್ನು ಸಾರಿಗೆ ವ್ಯವಸ್ಥೆ ಸರಿಯಿಲ್ಲದ ಕಾರಣ ತರೀಕೆರೆ ತಾಲೂಕಿನಲ್ಲಿಯೇ ಉಳಿಸಬೇಕೆಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ’ ಎಂದು ತಿಳಿಸಿದರು.
ಜಿಲ್ಲಾ ಪಂಚಾಯಿತಿ ಸದಸ್ಯೆ ರಾಧಮ್ಮ, ತಾಲ್ಲೂಕು ಪಂಚಾಯಿತಿ ಸದಸ್ಯ ಕೃಷ್ಣಪ್ಪ, ಗ್ರಾಮ ಪಂಚಾಯಿತಿ ಸದಸ್ಯ ಕುಪ್ಪಣ್ಣ, ಮಾಜಿ ಸದಸ್ಯ ಚಂದ್ರಪ್ಪ ಇದ್ದರು.