ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಚ್ಛ ಸರ್ವೇಕ್ಷಣೆ 2018: ಮಂಡ್ಯದ ಸ್ಥಾನ ಬದಲಾಗುವುದೇ?

ಅಧಿಕಾರಿಗಳಿಂದ ಸ್ವಚ್ಛತೆ ಪರಿಶೀಲನೆ, ನಗರಾಭಿವೃದ್ಧಿ ಇಲಾಖೆಯಿಂದ ನಗರಸಭೆಗೆ ಸೂಚನೆ
Last Updated 31 ಡಿಸೆಂಬರ್ 2017, 11:45 IST
ಅಕ್ಷರ ಗಾತ್ರ

ಮಂಡ್ಯ: ಈ ಹೊಸ ವರ್ಷದಲ್ಲಿ ಹೊಸದಾಗಿ ನಗರ ಸ್ವಚ್ಛತಾ ಸರ್ವೇಕ್ಷಣಾ ಸಮೀಕ್ಷೆ ಆರಂಭವಾಗುತ್ತಿದೆ. ಕಳೆದ ವರ್ಷ ನಡೆದ ಸಮೀಕ್ಷೆಯಲ್ಲಿ ನಗರ ರಾಜ್ಯದ ಐದನೇ ಸ್ವಚ್ಛ ನಗರ ಎಂಬ ಕೀರ್ತಿಗೆ ಪಾತ್ರವಾಗಿತ್ತು. ಈ ವರ್ಷದಲ್ಲಿ ಸಮೀಕ್ಷೆ ಮತ್ತೆ ಬಂದಿದ್ದು ನಗರದ ಸ್ವಚ್ಛತೆಯ ಸ್ಥಾನ ಮೇಲಕ್ಕೇರುವುದೇ ಅಥವಾ ಕೆಳಕ್ಕೆ ಬೀಳುವುದೇ ಎಂಬ ಕುತೂಹಲ ಉಂಟಾಗಿದೆ.

ಕೇಂದ್ರ ಸರ್ಕಾರದ ನಗರಾಭಿವೃದ್ಧಿ ಸಚಿವಾಲಯ ಸ್ವಚ್ಛ ಭಾರತ ಅಭಿಯಾನದಡಿ ಈ ವರ್ಷ ದೇಶದ 4,041 ನಗರ ಹಾಗೂ ಪಟ್ಟಣಗಳನ್ನು ಸಮೀಕ್ಷೆಗೆ ಆಯ್ಕೆ ಮಾಡಿಕೊಂಡಿದೆ. ಅದರಲ್ಲಿ ಮಂಡ್ಯ ನಗರವೂ ಸ್ಥಾನ ಪಡೆದಿದೆ. ನಗರಾಭಿವೃದ್ಧಿ ಸಚಿವಾಲಯದ ತಂಡ ನಗರಕ್ಕೆ ಭೇಟಿ ನೀಡಿ ಸ್ವಚ್ಛತೆಯ ಬಗ್ಗೆ ಮಾಹಿತಿ ಪಡೆಯುತ್ತದೆ.

ಜನವರಿಯಿಂದ ಏಪ್ರಿಲ್‌ ತಿಂಗಳವರೆಗೂ ಸಮೀಕ್ಷೆ ನಡೆಸುತ್ತದೆ. ಜೂನ್‌ ತಿಂಗಳಲ್ಲಿ ಸಮೀಕ್ಷೆ ಫಲಿತಾಂಶ ಬಹಿರಂಗವಾಗುತ್ತದೆ. ಆಗ ನಗರಗಳ ಸ್ವಚ್ಛತೆಯ ಸ್ಥಾನ ತಿಳಿಯುತ್ತದೆ. ಕಳೆದ ವರ್ಷ ಜೂನ್‌ನಲ್ಲಿ ಫಲಿತಾಂಶ ಬಂದಾಗ ಮಂಡ್ಯವನ್ನು ಐದನೇ ಸ್ಥಾನದಿಂದ ಮೂರನೇ ಸ್ಥಾನಕ್ಕೇರಿಸುವ ಸಂಕಲ್ಪವನ್ನು ನಗರಸಭೆ ಮಾಡಿತ್ತು. ಅದರಂತೆ ನಗರದ ಸ್ವಚ್ಛತೆಗಾಗಿ ವಿವಿಧ ಕ್ರಮ ಅನುಸರಿಸಿತ್ತು. ನಗರ ಸೌಂದರ್ಯ ಅರಳಿಸಲು ನಗರಸಭೆ ಕೈಕೊಂಡಿರುವ ಕೆಲಸಗಳ ಫಲ ಜೂನ್‌ನಲ್ಲಿ ತಿಳಿಯಲಿದೆ.

ಸಾರ್ವಜನಿಕರಿಗೆ ಅವಕಾಶ:
ಸರ್ವೇಕ್ಷಣಾ ತಂಡ ಮೂರು ಹಂತದಲ್ಲಿ ಸ್ವಚ್ಛತಾ ಸಮೀಕ್ಷೆ ನಡೆಸುತ್ತದೆ. ಅದಕ್ಕಾಗಿ 4,000 ಅಂಕ ನಿಗದಿ ಮಾಡಿದೆ. ಮೊದಲ ಹಂತದಲ್ಲಿ ನಗರಸಭೆಯಿಂದ ಸ್ವಚ್ಛತೆಗಾಗಿ ಕೈಗೊಂಡಿರುವ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸುತ್ತದೆ. ಕಸ ಸಂಗ್ರಹ ವಾಹನಗಳ ಸಂಖ್ಯೆ, ಕಸದ ವಿಂಗಡಣೆ ಹಾಗೂ ನಿರ್ವಹಣೆ ಬಗ್ಗೆ ಮೊದಲ ಹಂತದಲ್ಲಿ ತಂಡಕ್ಕೆ ಮಾಹಿತಿ ಸಿಗುತ್ತದೆ. ಇದಕ್ಕೆ 1,400 ಅಂಕ ನಿಗದಿ ಮಾಡಲಾಗಿದೆ. ಎರಡನೇ ಹಂತದಲ್ಲಿ ಸರ್ವೇಕ್ಷಣಾ ತಂಡ ನಗರಕ್ಕೆ ಪ್ರತ್ಯಕ್ಷವಾಗಿ ಭೇಟಿ ನೀಡುತ್ತದೆ. ನಗರದ ಪ್ರಮುಖ ಸ್ಥಳಗಳಲ್ಲಿ ಕಸವನ್ನು ಹೇಗೆ ನಿರ್ವಹಣೆ ಮಾಡಲಾಗುತ್ತಿದೆ. ಸ್ವಚ್ಛತಾ ಸಿಬ್ಬಂದಿಯ ಕಾರ್ಯ ನಿರ್ವಹಣೆ ಬಗ್ಗೆ ಮಾಹಿತಿ ಪಡೆಯುತ್ತದೆ. ಇದಕ್ಕೆ 1,200 ಅಂಕ ನಿಗದಿ ಮಾಡಲಾಗಿದೆ.

ಮೂರನೇ ಹಂತದಲ್ಲಿ ವಿಶೇಷವಾಗಿ ಸಾರ್ವಜನಿಕರನ್ನು ಭೇಟಿಯಾಗಿ ತಂಡ ಮಾಹಿತಿ ಪಡೆಯುತ್ತದೆ. ನಗರದ ಪ್ರಮುಖ ಸ್ಥಳಗಳು ಕಳೆದ ವರ್ಷಕ್ಕಿಂತ ಈ ವರ್ಷ ಸ್ವಚ್ಛತೆಯಲ್ಲಿ ಹೇಗೆ ಉತ್ತಮವಾಗಿವೆ ಎಂಬ ಬಗ್ಗೆ ಜನರಿಂದ ಮಾಹಿತಿ ಪಡೆಯುತ್ತದೆ. ಕಸ ಸಂಗ್ರಹಣೆ, ಕಸದ ತೊಟ್ಟಿ ನಿರ್ವಹಣೆ, ಸಾರ್ವಜನಿಕರ ಶೌಚಾಲಯ ಬಳಕೆ, ವೈಯಕ್ತಿಕ ಶೌಚಾಲಯ ಬಳಕೆ ಮಾಡುವ ಬಗ್ಗೆಯೂ ಮಾಹಿತಿಯನ್ನು ಕಲೆ ಹಾಕುತ್ತದೆ. ಈ ಹಂತಕ್ಕೆ 1,400 ಅಂಕಗಳನ್ನು ನಿಗದಿ ಮಾಡಲಾಗಿದೆ. ಎರಡೂ ಹಂತಗಳಿಗಿಂತಲೂ ಸರ್ವೇಕ್ಷಣಾ ತಂಡ ಸಾರ್ವಜನಿಕ ಭೇಟಿ ಹಂತಕ್ಕೆ ಮೊದಲ ಆದ್ಯತೆ ನೀಡುತ್ತದೆ. ಎಲ್ಲಾ ಪ್ರಕ್ರಿಯೆ ಮುಗಿದ ನಂತರ ಫಲಿತಾಂಶ ಪ್ರಕಟಗೊಳ್ಳುತ್ತದೆ.

ನಗರದಲ್ಲಿ ಹೊಳಲು ಸರ್ಕಲ್‌, ವಿವಿ ರಸ್ತೆ, ಆರ್‌ಪಿ ರಸ್ತೆ, ನೂರು ಅಡಿ ರಸ್ತೆ, ಫ್ಯಾಕ್ಟರಿ ವೃತ್ತ, ಜೆ.ಸಿ.ವೃತ್ತ, ಗುತ್ತಲು ರಸ್ತೆ, ಪೇಟೆ ಬೀದಿ, ವಿನೋಬಾ ರಸ್ತೆ, ಸಂಜಯ ವೃತ್ತ, ಮಹಾವೀರ ವೃತ್ತ ಮುಂತಾದೆಡೆಗಳಿಗೆ ಸರ್ವೇಕ್ಷಣಾ ತಂಡ ಭೇಟಿ ಮಾಡಿ ಪರಿಶೀಲನೆ ನಡೆಸಲಿದೆ. ಅಲ್ಲದೆ ಗಾಂಧಿನಗರ, ಸುಭಾಷ್‌ ನಗರ, ವಿವಿ ನಗರ, ಬಂದೀಗೌಡ ಬಡಾವಣೆ, ಶಂಕರ ನಗರ, ಅಶೋಕ ನಗರ ಮುಂತಾದ ಜನವಸತಿ ಪ್ರದೇಶಗಳಿಗೂ ಭೇಟಿ ನೀಡಿ ತಂಡ ಸ್ವಚ್ಛತೆ ಪರಿಶೀಲನೆ ನಡೆಸಲಿದೆ.

‘ಕಳೆದ ವರ್ಷದಂತೆ ಈ ವರ್ಷವೂ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ನಿರ್ಮಲಾನಂದನಾಥ ಸ್ವಾಮೀಜಿಗಳು ನಗರದ ಸ್ವಚ್ಛತಾ ರಾಯಭಾರಿಯಾಗಿ ಮುಂದುವರಿಯಲಿದ್ದಾರೆ. ಈ ವರ್ಷದ ಸಮೀಕ್ಷೆಯಲ್ಲಿ ನಗರ ಮೂರನೇ ಸ್ಥಾನ ನಿರೀಕ್ಷೆ ಮಾಡಿದ್ದೇವೆ. ಅದಕ್ಕಾಗಿ ಅಗತ್ಯ ಸಿದ್ಧತೆ ಮಾಡಿಕೊಂಡಿದ್ದೇವೆ. ನಗರಾಭಿವೃದ್ಧಿ ಇಲಾಖೆಯ ಎಲ್ಲಾ ಸೂಚನೆ ಪಾಲನೆ ಮಾಡಿದ್ದೇವೆ’ ಎಂದು ನಗರಸಭೆ ಪೌರಾಯುಕ್ತ ಟಿ.ಎನ್‌.ನರಸಿಂಹಮೂರ್ತಿ ತಿಳಿಸಿದರು.

‘ನಗರದಲ್ಲಿ ಸ್ವಚ್ಛತೆ ಸಮರ್ಪಕವಾಗಿಲ್ಲ. ಎಲ್ಲೆಂದರಲ್ಲಿ ಕಸ ಬಿದ್ದಿರುತ್ತದೆ. ಕಸದ ತೊಟ್ಟಿಯಲ್ಲಿ ಬೀದಿನಾಯಿಗಳು ಕಚ್ಚಾಡುತ್ತಿರುತ್ತವೆ. ನಗರಸಭೆಯ ಸ್ವಚ್ಛತಾ ಸಿಬ್ಬಂದಿ ವಾರವಾದರೂ ಕಸದ ತೊಟ್ಟಿಯ ಕಸವನ್ನು ಸಂಗ್ರಹ ಮಾಡುತ್ತಿಲ್ಲ. ಇದು ಹೀಗೆಯೇ ಮುಂದುವರಿದರೆ ನಗರದ ಸ್ವಚ್ಛತಾ ಸ್ಥಾನ ಕುಸಿಯುತ್ತದೆ’ ಎಂದು ಅಶೋಕ್‌ ನಗರದ ನಿವಾಸಿ ರಾಜೇಶ್‌ ಆರೋಪಿಸಿದರು.

ಆ್ಯಪ್‌ ಮೂಲಕ ಮಾಹಿತಿ ಕೊಡಿ

ಸರ್ವೇಕ್ಷಣಾ ತಂಡಕ್ಕೆ ಸಾರ್ವಜನಿಕರು ನಗರದ ಸ್ವಚ್ಛತೆಯ ಬಗ್ಗೆ ಆ್ಯಪ್‌ ಮೂಲಕ ಮಾಹಿತಿ ನೀಡಲು ಅವಕಾಶ ಕಲ್ಪಿಸಲಾಗಿದೆ. ನಗರಾಭಿವೃದ್ಧಿ ಇಲಾಖೆ ಅದಕ್ಕಾಗಿ ‘ಸ್ವಚ್ಛತಾ’ ಆ್ಯಪ್‌ ರೂಪಿಸಿದೆ. ಗೂಗಲ್‌ ಪ್ಲೇಸ್ಟೋರ್‌ನಲ್ಲಿ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಳ್ಳಬಹುದು. ಆ್ಯಪ್‌ನಲ್ಲಿ ಸರ್ವೇಕ್ಷಣಾ ಪ್ರಕ್ರಿಯೆ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಾಗಿದೆ. ನಗರ, ಸ್ಥಳೀಯ ಭಾಷೆಯನ್ನು ಆಯ್ಕೆ ಮಾಡಿಕೊಂಡು ಸಾರ್ವಜನಿಕರು ಸ್ವಚ್ಛತೆಯ ಮಾಹಿತಿ ನೀಡಬಹುದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT