ತುಮಕೂರು: ಕುಟುಂಬ ಎಂದರೆ ಸಂಸಾರ, ಆ ಸಂಸಾರದ ಮೌಲ್ಯಗಳನ್ನು ಉಳಿಸುವ ಹೊಣೆ ತಾಯಿಯ ಮೇಲೆ ಇರುತ್ತದೆ ಎಂದು ಮಾಜಿ ಸಚಿವೆ ಲೀಲಾದೇವಿ ಆರ್.ಪ್ರಸಾದ್ ಅಭಿಪ್ರಾಯಪಟ್ಟರು.
ನಗರದಲ್ಲಿ ಭಾನುವಾರ ಮಹಿಳಾ ಸಮನ್ವಯ ಸಮಿತಿ ಹಮ್ಮಿಕೊಂಡಿದ್ದ ಮಾತೃ ಸಮಾವೇಶದಲ್ಲಿ ಮಾತನಾಡಿದರು.
’ಹೆತ್ತವರನ್ನು ವೃದ್ಧಾಶ್ರಮಗಳಿಗೆ ಕಳುಹಿಸದ ಕೌಟುಂಬಿಕ ವ್ಯವಸ್ಥೆ ಇಂದು ಅಗತ್ಯವಾಗಿದೆ. ಮೊದಲು ಮಹಿಳೆ ತನ್ನ ಮನೆಯನ್ನು ಗೆಲ್ಲಬೇಕು. ಕುಟುಂಬದಲ್ಲಿನ ಎಲ್ಲರನ್ನೂ ತನ್ನ ಜೊತೆಯಲ್ಲಿ ಕರೆದುಕೊಂಡು ಹೋಗುವ ಮೌಲ್ಯಗಳನ್ನು ಮಹಿಳೆ ಬೆಳೆಸಿಕೊಳ್ಳಬೇಕಾಗುತ್ತದೆ’ ಎಂದರು.
’ತಾಯಿ ಕಣ್ಣಿಗೆ ಕಾಣುವ ದೇವರು. ತಾಯಿಯಲ್ಲಿ ದೇವರು ನೆಲೆಸಿದ್ದಾನೆ. ತನ್ನ ಮಗುವಿಗೆ ತಂದೆ ಯಾರು ಎಂಬುದನ್ನು ಪರಿಚಯಿಸಿಕೊಡುವ ಕೆಲಸ ತಾಯಿಯದ್ದು. ಆದ್ದರಿಂದ ತಾಯಿ ಸತ್ಯ, ತಂದೆ ನಂಬಿಕೆ’ ಎಂದರು.
ಮಹಿಳೆ ಸುರಕ್ಷಿತವಾಗಿ ಇರಬೇಕಾದರೆ ಮೊದಲು ಶಿಕ್ಷಣ ಪಡೆಯಬೇಕು. ಆಗ ಮಾತ್ರ ಮಹಿಳೆಯರ ಮೇಲಿನ ಹಲ್ಲೆಗಳು ನಿಲ್ಲುತ್ತವೆ. ತಂದೆ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳುವಂತೆ ಮಕ್ಕಳನ್ನು ತಾಯಂದಿರು ಬೆಳೆಸಬೇಕು ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಬೆಂಗಳೂರಿನ ಅಂಚಿಪುರ ಸಿದ್ಧಾರೂಢ ಆಶ್ರಮದ ಸಾಧ್ವಿ ಉಮಾಭಾರತಿ,’ಜೀವನದಲ್ಲಿ ಗುರುವಿನ ಮಹತ್ವ ಹೆಚ್ಚಿದೆ. ಅರಿವೇ ಗುರು, ಅಷ್ಟ ಮದಗಳನ್ನು ತೊರೆದು ಬದುಕುವ ಅವಶ್ಯಕತೆ ಇದೆ. ದೃಢವಿಲ್ಲದ ಭಕ್ತಿ ಛಿದ್ರವಾದ ಮಡಿಕೆಯಲ್ಲಿ ಅಮೃತ ಇದ್ದಂತೆ’ ಎಂದು ಅಭಿಪ್ರಾಯಪಟ್ಟರು.
ರಾಷ್ಟ್ರ ಸೇವಿಕಾ ಸಮಿತಿಯ ದಕ್ಷಿಣ ಕರ್ನಾಟಕ ಹೊಯ್ಸಳ ಪ್ರಾಂತ ಸಂಪರ್ಕ ಪ್ರಮುಖ್ ಮೀನಾಕ್ಷಿ , ಮಹಿಳಾ ಸಮನ್ವಯ ಸಮಿತಿಯ ಕಾರ್ಯಾಧ್ಯಕ್ಷೆ ಪರಿಮಳಾ ಕುಮಾರ್, ಪ್ರಧಾನ ಕಾರ್ಯದರ್ಶಿ ವಾಸವಿ ಗುಪ್ತಾ, ಸಮಾವೇಶದ ಸ್ವಾಗತ ಸಮಿತಿ ಅಧ್ಯಕ್ಷೆ ಪೂರ್ಣಿಮಾ ಇದ್ದರು.