ಅಕ್ಕಿಆಲೂರ: ಇಲ್ಲಿಗೆ ಸಮೀಪದ ಗೆಜ್ಜಿಹಳ್ಳಿ ಗ್ರಾಮದಲ್ಲಿ ಬಿಜೆಪಿ ಪರಿವರ್ತನಾ ಯಾತ್ರೆಯ ಫ್ಲೆಕ್ಸ್, ಬಂಟಿಂಗ್ಸ್ ಹಾಗೂ ಧ್ವಜ ಕಿತ್ತೆಸೆಯಲಾಗಿದೆ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ಸೋಮವಾರ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.
‘ಹೊಸ ವರ್ಷಾಚರಣೆಯ ವೇಳೆ ಭಾನುವಾರ ತಡ ರಾತ್ರಿ ಕೆಲ ಕಿಡಿಗೇಡಿಗಳು ಈ ಕೃತ್ಯ ಎಸೆಗಿದ್ದಾರೆ. ಇದನ್ನು ಗಮನಿಸಿದ ಬಿಜೆಪಿ ಕಾರ್ಯಕರ್ತರು ತಡೆಯಲು ಯತ್ನಿಸಿದ್ದಾರೆ. ಘಟನೆಯನ್ನು ಕೆಲವರು ಮೊಬೈಲ್ನಲ್ಲಿ ಚಿತ್ರೀಕರಿಸಿಕೊಂಡಿದ್ದಾರೆ. ದುಂಡಾವರ್ತನೆ ತೋರಿದವರ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.
ಶಿಗ್ಗಾವಿ ಡಿವೈಎಸ್ಪಿ ಎಲ್.ವೈ.ಶಿರಕೋಳ ಅವರು ದೂರವಾಣಿ ಮೂಲಕ ಪ್ರತಿಭಟನಾನಿರತ ಬಿಜೆಪಿ ಕಾರ್ಯಕರ್ತರ ಮನವೊಲಿಸಿದರು. ಬಳಿಕ ಪ್ರತಿಭಟನೆ ಹಿಂಪಡೆದರು. ಪ್ರತಿಭಟನೆಯ ನೇತೃತ್ವವನ್ನು ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ನಿಂಗಪ್ಪ ಗೊಬ್ಬೇರ ವಹಿಸಿದ್ದರು.
ಜಿಲ್ಲಾ ಸಹಕಾರಿ ಯುನಿಯನ್ ಅಧ್ಯಕ್ಷ ಕಲ್ಯಾಣಕುಮಾರ ಶೆಟ್ಟರ, ಗೆಜ್ಜಿಹಳ್ಳಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ರಾಜೂ ಮಲ್ಲಿಗಾರ, ಡೊಳ್ಳೇಶ್ವರ ಗ್ರಾಮ ಪಂಚಾಯ್ತಿ ಅಧ್ಯಕ್ಷ ಮಹ್ಮದ್ಯುಸೂಫ್ ಮುಂಡರಗಿ, ಮುಖಂಡರಾದ ನಾಗನಗೌಡ ಪಾಟೀಲ, ರಾಕೇಶ ವಾಲಿಕಾರ, ಹನುಮಂತಪ್ಪ ಕಟ್ಟಿಮನಿ, ಬಾಬಣ್ಣ ಚವ್ಹಾಣ ಇದ್ದರು.