ಲಿಂಗಾಯತರಿಗಿಂತ ಮೊದಲು ಬ್ರಾಹ್ಮಣರಿಗೆ ಪ್ರತ್ಯೇಕ ಧರ್ಮದ ಸ್ಥಾನ ನೀಡುವುದು ಸೂಕ್ತ. ಬ್ರಾಹ್ಮಣರು ವೈದಿಕ ಧರ್ಮಾನುಯಾಯಿಗಳಾಗಿದ್ದು, ಅವರು ಹಿಂದೂಗಳಲ್ಲ. ಪ್ರಾಚೀನ ಕಾಲದಿಂದಲೂ ಭಾರತದಲ್ಲಿ ವೈದಿಕರು, ಜೈನರು ಹಾಗೂ ಬೌದ್ಧರು ಇದ್ದರು. ಜನಸಾಮಾನ್ಯರು ಬ್ರಾಹ್ಮಣರನ್ನು ಅನುಕರಿಸಿ ನಡೆಯುತ್ತಿದ್ದರು. ಅವರಿಗೆ ಯಾವುದೇ ನಿರ್ದಿಷ್ಟ ಧರ್ಮವಿರಲಿಲ್ಲ. ಚಂದ್ರಗುಪ್ತ ಮೌರ್ಯ ವೈದಿಕ ಧರ್ಮ ಬಿಟ್ಟು ಜೈನಧರ್ಮ ಸ್ವೀಕರಿಸಿದ, ಅವನ ಮಗ ಬಿಂದುಸಾರ ವೈದಿಕ ಧರ್ಮವನ್ನು ಪಾಲಿಸಿದ. ಬಿಂದುಸಾರನ ಮಗ ಅಶೋಕ ಬೌದ್ಧ ಧರ್ಮ ಸ್ವೀಕರಿಸಿದ. ರಾಜನ ಧರ್ಮವನ್ನೇ ಜನಸಾಮಾನ್ಯರು ಅನುಸರಿಸುತ್ತಿದ್ದರು.