ಹಾಸನ: ಚನ್ನಪಟ್ಟಣ ಕೆರೆ ಡಿ-ನೋಟಿಫಿಕೇಷನ್ ಆಗಿರುವುದನ್ನು ರದ್ದುಪಡಿಸಿದರೆ ಮಾತ್ರ ಪುನಶ್ಚೇತನದ ಹಾದಿಯಲ್ಲಿ ಮುಂದುವರಿಯಲು ಸಾಧ್ಯ’ ಎಂದು ಬೆಂಗಳೂರಿನ ನೀರು ಸರಬ ರಾಜು ಮತ್ತು ಒಳಚರಂಡಿ ಮಂಡಳಿಯ ಮುಖ್ಯ ಎಂಜಿನಿಯರ್ ರವೀಂದ್ರ ಹೇಳಿದರು.
ನಗರದ ಚನ್ನಪಟ್ಟಣಕೆರೆ, ಹುಣಸಿನಕೆರೆ ಮತ್ತು ಸತ್ಯವಂಗಲಕೆರೆ ವೀಕ್ಷಣೆ ಬಳಿಕ ಮಾತನಾಡಿದರು.
ಹುಣಸಿನಕೆರೆಯ ಪಶ್ಚಿಮದಲ್ಲಿರುವ ಕೋಡಿಯಂತೆ ಕೆರೆಯ ಪೂರ್ವ ಭಾಗದ ಮೊದಲ ಕೋಡಿಯ ಸಮೀಪ ದಲ್ಲೇ ಅಷ್ಟೇ ಎತ್ತರದ ಪ್ರತ್ಯೇಕ ಕೋಡಿ ನಿರ್ಮಿಸುವುದರಿಂದ ಹಾಗೂ ಪೂರ್ವ ಭಾಗದ ಮೊದಲ ಕೋಡಿ ತಗ್ಗಿಸು ವುದರಿಂದ ಮಲಿನ ನೀರು ಸರಾಗವಾಗಿ ಹರಿಯುತ್ತದೆ ಎಂದು ಹೇಳಿದರು.
ವಿಶ್ವನಾಥನಗರದಿಂದ ಸೇತುವೆ ಮೂಲಕ ರಾಜ್ಕುಮಾರ್ ನಗರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಎಡ ಭಾಗದಲ್ಲಿ ವಿಶಾಲವಾಗಿರುವ ಕೆರೆಯಂ ಗಳದಲ್ಲಿ ಮನೆಗಳು, ಸಾಮಿಲ್, ಕೋಳಿ, ಕುರಿ ಮಾಂಸದ ಅಂಗಡಿ ನಿರ್ಮಿಸಿ ಕೊಳ್ಳಲಾಗಿದೆ. ಅಲ್ಲಿಂದ ನೇರವಾಗಿ ತ್ಯಾಜ್ಯ ತಂದು ಹುಣಸಿನಕೆರೆಗೆ ಸುರಿಯಲಾಗುತ್ತಿದೆ. ಈ ಭಾಗದ ನೀರನ್ನು ಪೂರ್ವ ಭಾಗದ ಕೋಡಿಗೆ ಹರಿಯುವಂತೆ ಮಾಡಿದರೆ ಗಲೀಜು ನೀರು ನಿಯಂತ್ರಿಸಲು ಸಾಧ್ಯ ಎಂದು ಸಲಹೆ ನೀಡಿದರು.
ಸತ್ಯಮಂಗಲ ಕೆರೆಯ ಹೂಳೆತ್ತಿದರೆ ಹೆಚ್ಚು ನೀರು ಸಂಗ್ರಹಿಸಬಹುದು. ಕೆರೆಯ ವಿಸ್ತೀರ್ಣ ನೀರಿನ ಧಾರಣಾ ಸಾಮರ್ಥ್ಯಕ್ಕೆ ಸಮಾನವಾಗಿದ್ದರೆ ಕೋಡಿ ಎತ್ತರಿಸುವ ಅಗತ್ಯವಿಲ್ಲ ಎಂದರು.
ಸಣ್ಣ ನೀರಾವರಿ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿ ಯರ್ ಮುನೀರ್ ಅಹಮದ್ ಪಾಷಾ ಅವರಿಗೆ ತಾಂತ್ರಿಕ ಮತ್ತು ಕೆರೆಯ ಪುನಶ್ಚೇತನಕ್ಕೆ ಸಲಹೆಗಳನ್ನು ನೀಡಿದರು.
ಪ್ರತಿಷ್ಠಾನದ ಬಿ.ಎಸ್.ದೇಸಾಯಿ, ಟಿ.ಎಂ.ಶಿವಶಂಕರಪ್ಪ, ಪಿ.ಪುಟ್ಟಯ್ಯ, ಎಸ್.ಎಸ್.ಪಾಷಾ, ತಿಮ್ಮೇಶ್ ಪ್ರಭು ಅವರು ನೀರಿನ ಸಮಸ್ಯೆಗಳ ಕುರಿತು ವಿವರಿಸಿದರು.
ತಾಂತ್ರಿಕ ಸಮಿತಿಯ ಸದಸ್ಯರಾದ ಪ್ರೊ. ರಮೇಶ್, ಸುಬ್ಬುಸ್ವಾಮಿ, ಮಂಜುನಾಥ್ ಮೋರೆ ಅವರು ಅಂತರ್ಜಲ ಕುಸಿದ ಕಾರಣ ವಿವರಿಸಿ, ಅದರ ಹೆಚ್ಚಳಕ್ಕೆ ಸಲಹೆ ಪಡೆದರು.
ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿಯ ಮುಖ್ಯ ವೈಜ್ಞಾನಿಕ ಅಧಿಕಾರಿ ಯು.ಟಿ.ವಿಜಯ್ ಮತ್ತು ಸಚಿನ್ ಅವರು ಹಸಿರುಭೂಮಿ ಪ್ರತಿಷ್ಠಾನದ ಸದಸ್ಯರೊಡನೆ ಶಾಂತಿಗ್ರಾಮ, ಎಸ್.ಬಂಡಿಹಳ್ಳಿ, ದೊಡ್ಡಕೊಂಡಗೊಳ, ಜವೇನಹಳ್ಳಿ ಮಠದ ಕಲ್ಯಾಣಿಗಳ ವೀಕ್ಷಣೆ ಮಾಡಿ, ಹಲವು ಸಲಹೆ ನೀಡಿದರು.
ಪ್ರತಿಷ್ಠಾನದ ರೂಪ ಹಾಸನ, ಟಿ.ಎಂ.ಶಿವಶಂಕರಪ್ಪ, ಸುಬ್ಬುಸ್ವಾಮಿ, ಪ್ರೊ. ರಮೇಶ್, ಮಂಜುನಾಥ್, ಬಿಈಜಿ ಕಾಲೇಜಿನ ಪ್ರಾಂಶುಪಾಲ ಜಗದೀಶ್ ಇದ್ದರು. ನಂತರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ.ಜಾನಕಿ ಅವರನ್ನು ವಿಜ್ಞಾನಿಗಳು ಮತ್ತು ಪ್ರತಿಷ್ಠಾನದ ಪದಾಧಿಕಾರಿಗಳ ತಂಡ ಭೇಟಿ ಮಾಡಿತು.
ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿಯು ಜಿಲ್ಲೆಯಾದ್ಯಂತ ಅಧ್ಯಯನ ನಡೆಸಿ 233 ಕಲ್ಯಾಣಿಗಳ ಸ್ಥಿತಿಗತಿ, ನೀರು ಸಂಗ್ರಹ ಸಾಮರ್ಥ್ಯ, ಅದರ ಪುನಶ್ಚೇತನಕ್ಕೆ ಬೇಕಾದ ಅಂದಾಜು ವೆಚ್ಚದ ವಿವರವಾದ ವರದಿಯನ್ನು ಅಧಿಕಾರಿಗಳಿಗೆ ನೀಡಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.