ಹೆತ್ತೂರು: ಯಸಳೂರು ಹೋಬಳಿಯ ಗೊದ್ದು ಗ್ರಾಮದ ಘಟ್ಟದ ಬಾಗಿಲು ಕುಮಾರ ಲಿಂಗೇಶ್ವರ ದೊಡ್ಡಯ್ಯ ಸ್ವಾಮಿಯ 347ನೇ ಜಾತ್ರಾ ಮಹೋತ್ಸವ ಸಾವಿರಾರು ಭಕ್ತರ ಪೂಜೆ, ಹರಕೆ– ಹವನಗಳ ನಡುವೆ ಮಂಗಳವಾರ ಅದ್ಧೂರಿಯಾಗಿ ನಡೆಯಿತು.
ಪಶ್ಚಿಮಘಟ್ಟದ ಬಿಸಿಲೆ ಹಾಗೂ ಕೊಡಗಿನ ಪುಷ್ಪಗಿರಿ ರಕ್ಷಿತ ಅರಣ್ಯದ ಅಂಚಿನಲ್ಲಿ ನಡೆದ ಜಾತ್ರೆಗೆ ಸಾವಿರಾರು ಭಕ್ತರು ಭೇಟಿ ನೀಡಿ ಪೂಜೆ ಸಲ್ಲಿಸಿದರು.
ತಂಬಲಗೆರೆ, ತಂಬೈಲು, ಕೂಂಗಳ್ಳಿ, ಹೂಂಗಡಹಳ್ಳ, ಮಾಗೇರಿ, ವಣಗೂರು ಸುತ್ತಮುತ್ತಲಿನ ಗ್ರಾಮಸ್ಥರು ತಪ್ಪದೆ ಬರುತ್ತಾರೆ. ಕೊಡಗು, ಹಾಸನ, ಚಿಕ್ಕಮಗಳೂರುಗಳಿಂದಲೂ ಭಕ್ತರು ಬಂದಿದ್ದರು.
ಬೆಳಿಗ್ಗೆ 6ರ ಸುಮಾರಿಗೆ ಸುತ್ತಮುತ್ತ ಲಿನ ಗ್ರಾಮಸ್ಥರು ತಂಬಾಯಿಲು ಗ್ರಾಮ ಮೂಲ ದೇವಸ್ಥಾನದಿಂದ ದೊಡ್ಡಯ್ಯನ ಉತ್ಸವ ಮೂರ್ತಿಯನ್ನು ಮಲೆನಾಡಿನ ಕರಡಿ ವಾದ್ಯ, ತಮಟೆವಾದ್ಯ ಸುಗ್ಗಿ ಕುಣಿತದೊಂದಿಗೆ ಕೂಂಗಳ್ಳಿ ಕುಮಾರ ಲಿಂಗೇಶ್ವರಸ್ವಾಮಿ ದೇವಸ್ಥಾನಕ್ಕೆ ಮೆರವಣಿಗೆಯಲ್ಲಿ ತಂದರು.