ಶಿಕಾರಿಪುರ: ಪಟ್ಟಣದ ಹುಚ್ಚರಾಯ ಸ್ವಾಮಿ ಕೆರೆಗೆ ವಲಸೆ ಬಂದಿರುವ ವಿದೇಶಿ ಹಕ್ಕಿಗಳ ಕಲರವ ಹೆಚ್ಚಾಗಿದ್ದು, ವಾಯು ವಿಹಾರಿಗಳು ಹಾಗೂ ಪಕ್ಷಿ ಪ್ರಿಯರನ್ನು ಆಕರ್ಷಿಸುತ್ತಿವೆ.
ಹುಚ್ಚರಾಯಸ್ವಾಮಿ ಕೆರೆಗೆ ಸೆಂಟ್ರಲ್ ಏಷ್ಯಾದ ಮಂಗೋಲಿಯಾ ದೇಶದಿಂದ ನೂರಾರು ಪಟ್ಟೆ ತಲೆಯ ಹೆಬ್ಬಾತುಗಳು (ಬಾರ್ ಹೆಡೆಡ್ ಗೂಸ್) ವಲಸೆ ಬಂದಿವೆ. ಪಕ್ಷಿ ವೀಕ್ಷಕ ಸುಹಾಸ್ ಶಿಕಾರಿಪುರ ಪ್ರಕಾರ ಈ ಹಕ್ಕಿಗಳು ಸುಮಾರು 5000 ಕಿ.ಮೀ. ವ್ಯಾಪ್ತಿಯಿಂದ ಕೆರೆಗೆ ವಲಸೆ ಬರುತ್ತವೆ ಎಂದು ಅಂದಾಜಿಸಲಾಗಿದೆ.
ಈ ಹಕ್ಕಿಗಳು ನವಂಬರ್, ಡಿಸೆಂಬರ್ ಹಾಗೂ ಜನವರಿ ತಿಂಗಳಲ್ಲಿ ರಾಜ್ಯದ ಆಯ್ದ ಕೆಲವೇ ಕೆರೆಗಳಿಗೆ ಮಾತ್ರ ವಲಸೆ ಬರುತ್ತಿದ್ದು, ಕೆರೆ ಸ್ವಚ್ಛವಾಗಿದ್ದರೆ, ಬೇಟೆ ತೊಂದರೆ ಇಲ್ಲದೇ ಇದ್ದರೆ ಹಾಗೂ ಹೇರಳವಾಗಿ ಆಹಾರ ದೊರೆಯುವ ಸ್ಥಳಗಳಿಗೆ ಮಾತ್ರ ಈ ಹಕ್ಕಿಗಳು ವಲಸೆ
ಬರುತ್ತವೆ.
ಬಿಸಿಲು ಸಂದರ್ಭದಲ್ಲಿ ಕೆರೆಯಲ್ಲಿ ವಿಶ್ರಾಂತಿ ಪಡೆಯುವ ಹಕ್ಕಿಗಳು ಸಂಜೆ ತಮ್ಮ ಆಹಾರ ಹುಡುಕಿಕೊಂಡು ತೆರಳುತ್ತವೆ. ಈ ಹಕ್ಕಿಗಳು ಸುತ್ತ ಮುತ್ತಲಿನ ಕೃಷಿ ಭೂಮಿಯಲ್ಲಿ ಭತ್ತದ ಕಟಾವ್(ಕೊಯ್ಲು) ನಂತರ ಉಳಿಯುವ ಪೈರಿನ ತುದಿಯನ್ನು ಆಹಾರವಾಗಿ ಸೇವಿಸುತ್ತವೆ.
ಪ್ರಸ್ತುತ ಹಕ್ಕಿಗಳು ಹುಚ್ಚರಾಯನ ಕೆರೆಗೆ ಬಂದಿರುವುದರಿಂದ ಕೆರೆಯ ಸೌಂದರ್ಯ ಮತ್ತಷ್ಟು ಹೆಚ್ಚಿದ್ದು, ಕೆರೆ ದಡದಲ್ಲಿರುವ ಭ್ರಾಂತೇಶ್ ಉದ್ಯಾನಕ್ಕೆ
ಬರುವ ಪ್ರವಾಸಿಗರನ್ನು ಕೂಡ ಈ ವಿದೇಶಿ ಹಕ್ಕಿಗಳು ಆಕರ್ಷಿಸುತ್ತಿವೆ.