ಔರಂಗಾಬಾದ್: ತ್ರಿವಳಿ ತಲಾಖ್ ಮಸೂದೆ ಮೂಲಕ ಮುಸ್ಲಿಂ ಸಮುದಾಯದ ಪುರುಷರಿಗೆ ಶಿಕ್ಷೆ ನೀಡುವ ಸಂಚು ನಡೆದಿದೆ ಎಂದು ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಒವೈಸಿ ಆರೋಪಿಸಿದರು.
‘ಪದ್ಮಾವತ್’ ಚಿತ್ರದ ಕುರಿತು ಪರಿಶೀಲನೆ ನಡೆಸಲು ಸಮಿತಿಯೊಂದನ್ನು ರಚಿಸಲಾಗಿತ್ತು. ಆದರೆ ತ್ರಿವಳಿ ತಲಾಖ್ ಮಸೂದೆ ಕುರಿತು ಇಂತಹ ಯಾವುದೇ ಸಮಿತಿ ರಚಿಸಲಿಲ್ಲ ಎಂದು ಅವರು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
‘ಮುಸ್ಲಿಂ ಮಹಿಳೆಯರನ್ನು ರಸ್ತೆಗಿಳಿಸಿ, ಮುಸ್ಲಿಂ ಪುರುಷರನ್ನು ಜೈಲಿಗೆಕಳುಹಿಸುವುದಕ್ಕಾಗಿ ಈ ಮಸೂದೆಜಾರಿಗೊಳಿಸುವ ಸಂಚು ನಡೆದಿದೆ’ ಎಂದು ಸಾರ್ವಜನಿಕ ಸಭೆಯಲ್ಲಿ ಹೇಳಿದರು.
ವಿಚ್ಛೇದನ ನೀಡಲು ತ್ರಿವಳಿ ತಲಾಖ್ ಮಾರ್ಗ ಅನುಸರಿಸುವವರನ್ನು ಸಾಮಾಜಿಕವಾಗಿ ಬಹಿಷ್ಕರಿಸಬೇಕು ಎಂದು ಅವರು ಇದೇ ವೇಳೆ ಮುಸ್ಲಿಂ ಸಮುದಾಯಕ್ಕೆ ಕರೆ ನೀಡಿದ್ದಾರೆ. ಬಜೆಟ್ನಲ್ಲಿ ಮುಸ್ಲಿಂ ಮಹಿಳೆಯರ ಕಲ್ಯಾಣಕ್ಕಾಗಿ ₹2,000 ಕೋಟಿ ಮೀಸಲಿರಿಸಬೇಕು ಎಂದು ಆಗ್ರಹಿಸಿದರು.
ಮುಸ್ಲಿಂ ಮಹಿಳೆಯರ (ಮದುವೆ ಹಕ್ಕುಗಳ ರಕ್ಷಣೆ) ಮಸೂದೆ 2017 (ತ್ರಿವಳಿ ತಲಾಖ್ ನಿಷೇಧ ಮಸೂದೆ) ಈಚೆಗೆ ಲೋಕಸಭೆಯಲ್ಲಿ ಅಂಗೀಕಾರವಾಗಿದೆ. ಆದರೆ ಮಸೂದೆಯನ್ನು ವಿವರವಾಗಿ ಪರಿಶೀಲಿಸಲು ಆಯ್ಕೆ ಸಮಿತಿಗೆ ಕಳುಹಿಸಬೇಕು ಎಂದು ವಿರೋಧ ಪಕ್ಷದವರು ಆಗ್ರಹಿಸಿದ್ದರಿಂದ ರಾಜ್ಯಸಭೆಯಲ್ಲಿ ಅಂಗೀಕಾರವಾಗಿಲ್ಲ.
ತ್ರಿವಳಿ ತಲಾಖೆ ನೀಡಿದರೆ ಪತಿಗೆ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಬಹುದು ಎಂದು ಕರಡು ಮಸೂದೆಯಲ್ಲಿ ಉಲ್ಲೇಖಿಸಲಾಗಿದೆ.