ಮೈಸೂರು: ಮೈಸೂರು ಮಹಾನಗರ ಪಾಲಿಕೆ ಮೇಯರ್ ಚುನಾವಣೆಯಲ್ಲಿ ಬುಧವಾರ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಭಾಗ್ಯವತಿ ಅವರು ನೂತನ ಮೇಯರ್ ಆಗಿ ಆಯ್ಕೆಯಾದರು.
ಭಾಗ್ಯವತಿ ಅವರು 43 ಮತಗಳನ್ನು ಪಡೆದಿದ್ದು, ಕಾಂಗ್ರಸ್ ಅಧಿಕೃತ ಅಭ್ಯರ್ಥಿ ಕಮಲಾ ಉದಯ್ ಸೋಲು ಕಂಡರು. ಇದರಿಂದಾಗಿ ತವರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮುಖಭಂಗವಾದಂತಾಗಿದೆ.
ಉಪಮೇಯರ್ ಆಗಿ ಜೆಡಿಎಸ್ನ ಇಂದಿರಾ ಮಹೇಶ್ ಆಯ್ಕೆಯಾದರು.
ಕಮಲ ಉದಯ್ ಕಾಂಗ್ರೆಸ್ನ ಅಧಿಕೃತ ಅಭ್ಯರ್ಥಿ ಎಂದು ಮನವರಿಕೆಯಾಗುತ್ತಿದ್ದಂತೆ ಕಾಂಗ್ರೆಸ್ನ ಭಾಗ್ಯವತಿ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು.
ಭಾಗ್ಯವತಿಗೆ ಜೆಡಿಎಸ್- ಬಿಜೆಪಿ ಮೈತ್ರಿ ಕೂಟದಿಂದ ಬೆಂಬಲ ದೊರೆಯಿತು.
ಜೆಡಿಎಸ್ ಸಾಲಿನಲ್ಲಿ ಕುಳಿತ ಕಾಂಗ್ರೆಸ್ ಸದಸ್ಯೆ ಭಾಗ್ಯವತಿಯನ್ನು ಕರೆತರಲು ಕಾಂಗ್ರೆಸ್ ಸದಸ್ಯರು ಹರಸಾಹಸ ಪಟ್ಟರು. ಜೆಡಿಎಸ್ ಮತ್ತು ಕಾಂಗ್ರೆಸ್ ಸದಸ್ಯರ ನಡುವೆ ತೀವ್ರ ಮಾತಿನ ಚಕಮಕಿ ನಡೆಯಿತು.
ಸಚಿವ ತನ್ವೀರ್ ಸೇಠ್ ಶಾಸಕ ಜಿ.ಟಿ. ದೇವೇಗೌಡರ ನಡುವೆ ಮಾತಿನ ಚಕಮಕಿ ನಡೆದು, ಚುನಾವಣಾ ಪ್ರಕ್ರಿಯೆ ನಡೆಸಲು ಕಾಂಗ್ರೆಸ್ ಸದಸ್ಯರು ಅವಕಾಶ ನೀಡದೆ ಗದ್ದಲದ ವಾತಾವರಣ ನಿರ್ಮಾಣವಾಗಿತ್ತು.
ಪ್ರಸ್ತುತ ಕೌನ್ಸಿಲ್ನ ಕೊನೆಯ ಅವಧಿಗೆ ಮೇಯರ್ ಸ್ಥಾನ ಪರಿಶಿಷ್ಟ ಜಾತಿ (ಎಸ್.ಸಿ) ಮತ್ತು ಉಪಮೇಯರ್ ಸ್ಥಾನ ಪರಿಶಿಷ್ಟ ಪಂಗಡದ (ಎಸ್.ಟಿ) ಮಹಿಳೆಯರಿಗೆ ಮೀಸಲಾಗಿತ್ತು.
ಪಾಲಿಕೆ ಬಲಾಬಲ
65 ಸದಸ್ಯ ಬಲದ ಪಾಲಿಕೆಯಲ್ಲಿ ಕಾಂಗ್ರೆಸ್ನ 21 ಸದಸ್ಯರು, ಜೆಡಿಎಸ್ನ 20 ಮತ್ತು ಬಿಜೆಪಿಯ 13 ಮಂದಿ ಇದ್ದಾರೆ. ಬಿಎಸ್ಆರ್, ಕೆಜೆಪಿ, ಎಸ್ಡಿಪಿಐ ಮತ್ತು ಪಕ್ಷೇತರರು ಸೇರಿ 11 ಮಂದಿ ಸದಸ್ಯರು ಇದ್ದಾರೆ.