ಮದ್ದೂರು: ಪಟ್ಟಣದ ತೋಟಗಾರಿಕೆ ಇಲಾಖೆ ಫಾರಂಗೆ ಸೇರಿದ ಸ್ಥಳದಲ್ಲಿ ಇಂದಿರಾ ಕ್ಯಾಂಟಿನ್ಗೆ ಸ್ಥಳ ನೀಡಲು ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕರು ನಿರಾಕರಿಸಿದ ಘಟನೆ ಸೋಮವಾರ ನಡೆಯಿತು.
ಅನುಕೂಲಕರ ಸ್ಥಳ ಗುರುತಿಸಲು ಸರ್ಕಾರದ ನಿರ್ದೇಶನದಂತೆ ಪುರಸಭೆ ಅಧಿಕಾರಿಗಳು ಸಾರಿಗೆ ಬಸ್ ನಿಲ್ದಾಣ, ತಾಲ್ಲೂಕು ಕಚೇರಿ ಹಾಗೂ ನ್ಯಾಯಾಲಯ ಸಂಕಿರ್ಣಕ್ಕೆ ಹತ್ತಿರದ ತೋಟಗಾರಿಕೆ ಇಲಾಖೆಗೆ ಸೇರಿದ ಸಸ್ಯಾಗಾರದ ನಿವೇಶನವನ್ನು ತಹಶೀಲ್ದಾರ್ ನಾಗರಾಜು ನೇತೃತ್ವದಲ್ಲಿ ಅಳತೆ ಮಾಡಲು ಮುಂದಾದರು.
ಸ್ಥಳಕ್ಕೆ ಬಂದ ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಶಾಂತರಾಜು ಅವರು, ಈಗಾಗಲೇ ಜಿಲ್ಲಾಧಿಕಾರಿಗಳಿಂದ ಇಲ್ಲಿ ಕ್ಯಾಂಟಿನ್ಗೆ ನಿವೇಶನ ಒದಗಿಸಲು 2017 ನವೆಂಬರ್ 18ರಂದು ನಿರಕ್ಷೇಪಣಾ ಪತ್ರ ನೀಡಲು ಕೋರಲಾಗಿತ್ತು. ಈ ಸ್ಥಳದಲ್ಲಿ ಸಸ್ಯಾಗಾರವಿದೆ. ಇದು ಇಲಾಖೆಗೆ ಅತ್ಯಾವಶ್ಯಕ ಸ್ಥಳ. ಇಲ್ಲಿ ಕ್ಯಾಂಟಿನ್ಗೆ ನಿವೇಶನ ನೀಡಲು ಸಾಧ್ಯವಿಲ್ಲ ಎಂದು ತಿಳಿಸಲಾಗಿದೆ ಎಂದು ವಿವರಿಸಿದರು.
ಇದೀಗ ಪುರಸಭೆ ಇದೇ ಸ್ಥಳದಲ್ಲಿ ಇಂದಿರಾ ಕ್ಯಾಂಟಿನ್ ನಿರ್ಮಿಸಲು ಒತ್ತಾಸೆ ತೋರಿದೆ. ಪುರಸಭಾ ಸದಸ್ಯರಾದ ಎಂ.ಪಿ.ಮಂಜುನಾಥ್, ಮರಿದೇವರು, ಸಮುದಾಯ ಅಧಿಕಾರಿ ಮಹೇಶ್, ಮುಖಂಡ ಬಸವರಾಜು ಹಾಜರಿದ್ದರು.