ಬೆಂಗಳೂರು: ನಷ್ಟದಲ್ಲಿರುವ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗೆ ಪ್ರಸಕ್ತ ಬಜೆಟ್ನಲ್ಲಿ ಘೋಷಿಸಲಾದ ಸಹಾಯಧನ ಅಲ್ಪ ಜೀವದಾನ ನೀಡಿದೆ.
ಬಿಎಂಟಿಸಿಗೆ ₹ 100 ಕೋಟಿ ಸಹಾಯಧನ ಘೋಷಿಸಲಾಗಿದೆ. ನಷ್ಟ ಸರಿದೂಗಿಸಲು ಬಿಎಂಟಿಸಿ ₹ 300 ಕೋಟಿ ಸಹಾಯಧನಕ್ಕೆ ಪ್ರಸ್ತಾವ ಸಲ್ಲಿಸಿತ್ತು.ಬಿಎಂಟಿಸಿ ವತಿಯಿಂದ 80 ವಿದ್ಯುತ್ ಬಸ್ಗಳ ಕಾರ್ಯಾಚರಣೆಗೆ ಬಜೆಟ್ ಸಮ್ಮತಿಸಿದೆ.
ಏಕೀಕೃತ ಭೂಸಾರಿಗೆ ಪ್ರಾಧಿಕಾರ ಸ್ಥಾಪಿಸಲು ಬಜೆಟ್ನಲ್ಲಿ ಪ್ರಸ್ತಾವ ಇಡಲಾಗಿದೆ. ಇದರ ಅಡಿ ಮೆಟ್ರೊ ರೈಲು ನಿಗಮ, ಬಿಎಂಟಿಸಿ, ಬಿಡಿಎ ಬಿಬಿಎಂಪಿ ನಡುವೆ ಸಮನ್ವಯ ಸಾಧಿಸಿ ಕೈಗೆಟಕುವ ದರದಲ್ಲಿ ಅಡೆತಡೆ ರಹಿತ ಸಾರಿಗೆ ವ್ಯವಸ್ಥೆ ಕಲ್ಪಿಸುವುದು ಇದರ ಉದ್ದೇಶ.
‘ಸರ್ಕಾರ ಸ್ಪಂದಿಸಿರುವುದು ಸಂತಸ ತಂದಿದೆ. ನಷ್ಟ ಸರಿತೂಗಿಸಲು ಸ್ವಲ್ಪ ನೆರವಾಗಲಿದೆ’ ಎಂದು ಸಂಸ್ಥೆಯ ಆಡಳಿತ ನಿರ್ದೇಶಕ ಪೊನ್ನುರಾಜ್ ಹೇಳಿದರು.
ಡೀಸೆಲ್ ದರ, ನಿರ್ವಹಣಾ ವೆಚ್ಚ ಏರಿಕೆಯಿಂದಾಗಿ ಪ್ರಯಾಣ ದರ ಪರಿಷ್ಕರಣೆಗೆ ಕೋರಿದ್ದೆವು. ಅದು ಕೂಡಾ ಸರ್ಕಾರದ ಪರಿಶೀಲನಾ ಹಂತದಲ್ಲಿದೆ. ವಿದ್ಯುತ್ ಬಸ್ಗಳ ಖರೀದಿ ಈಗಾಗಲೇ ಇದ್ದ ಪ್ರಸ್ತಾವ ಎಂದು ಅವರು ತಿಳಿಸಿದರು.
‘ಏಕೀಕೃತ ಭೂಸಾರಿಗೆ ಪ್ರಾಧಿಕಾರ ವಿಶ್ವದ ಬೇರೆ ಬೇರೆ ಕಡೆ ಇದೆ. ಒಳ್ಳೆಯ ಪರಿಕಲ್ಪನೆ. ಅದನ್ನು ಅಳವಡಿಸುವ ಬಗ್ಗೆ ಪ್ರಾಧಿಕಾರ ಕಾರ್ಯಯೋಜನೆ ರೂಪಿಸಲಿದೆ’ ಎಂದು ಅವರು ಪ್ರತಿಕ್ರಿಯಿಸಿದರು.
ಕೆಎಸ್ಆರ್ಟಿಸಿಗೆ 4,236 ಹೊಸ ಬಸ್ ಖರೀದಿಸುವ ಬಗ್ಗೆ ಬಜೆಟ್ ಹೇಳಿದೆ.