ಬೆಂಗಳೂರು: ಕರಾವಳಿ, ಮಲೆನಾಡು ಮತ್ತು ಘಟ್ಟ ಪ್ರದೇಶದಲ್ಲಿ ಮುಂಗಾರು ಚುರುಕುಗೊಂಡಿದೆ.
ಕೊಡಗು ಜಿಲ್ಲೆಯಾದ್ಯಂತ ಶುಕ್ರವಾರ ಮಧ್ಯಾಹ್ನದ ಬಳಿಕ ಉತ್ತಮ ಮಳೆಯಾಗುತ್ತಿದೆ.
ಕಾವೇರಿ ಕಣಿವೆಯ ಹಾರಂಗಿ ಜಲಾಶಯದ ಒಳಹರಿವು ಏರಿಕೆಯಾಗಿದ್ದು ಭರ್ತಿಗೆ 7 ಅಡಿ ಬಾಕಿಯಿದೆ. ಜಲಾಶಯದ ಗರಿಷ್ಠ ಮಟ್ಟ 2,859 ಅಡಿಯಾಗಿದ್ದು, ಶುಕ್ರವಾರ ಬೆಳಿಗ್ಗೆ 8.30ಕ್ಕೆ 2,851.50 ಅಡಿ ನೀರು ಸಂಗ್ರಹಗೊಂಡಿತ್ತು.
ಉತ್ತಮ ಮಳೆ:ಶಿವಮೊಗ್ಗ ಜಿಲ್ಲೆಯ ಹಲವೆಡೆ ಉತ್ತಮ ಮಳೆಯಾಗಿದೆ.
ಚಿತ್ರದುರ್ಗ ಜಿಲ್ಲೆಯ ವಿವಿಧೆಡೆ ಶುಕ್ರವಾರ ಸಾಧಾರಣ ಮಳೆಯಾಗಿದ್ದು, ಒಣಗುತ್ತಿದ್ದ ಬೆಳೆಗಳಿಗೆ ತಂಪೆರೆದಂತಾಗಿದೆ.
ದಾವಣಗೆರೆ ನಗರದಲ್ಲೂ ಮಧ್ಯಾಹ್ನ ಹದಮಳೆಯಾಯಿತು.
ಹಲವು ದಿನಗಳಿಂದ ಮಳೆ ಕೈಕೊಟ್ಟಿದ್ದರಿಂದ ರೈತರು ಚಿಂತೆಗೀಡಾಗಿದ್ದರು. ಈರುಳ್ಳಿ, ಶೇಂಗಾ ಬೆಳೆ ಒಣಗುವ ಹಂತಕ್ಕೆ ಬಂದಿತ್ತು.
ನಾಲ್ಕು ದಿನ ಭಾರಿ ಮಳೆ:ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಮತ್ತು ಗೋವಾ ಸುತ್ತಮುತ್ತ ಮುಂದಿನ ನಾಲ್ಕು ದಿನ ಗಾಳಿ ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಎರಡು ದಿನಗಳಿಂದ ತುಸು ಕ್ಷೀಣಿಸಿದ್ದ ಆರಿದ್ರಾ ನಕ್ಷತ್ರದ ಮಳೆಯು ಜಿಲ್ಲೆಯ ವಿವಿಧೆಡೆಶುಕ್ರವಾರ ಬೆಳಿಗ್ಗೆಯಿಂದ ಅಬ್ಬರಿಸುತ್ತಿದೆ. ನಗರವೂ ಸೇರಿದಂತೆ ತಾಲ್ಲೂಕಿನ ವಿವಿಧೆಡೆ ಮುಂಜಾನೆಯಿಂದ ಮಧ್ಯಾಹ್ನ 2 ಗಂಟೆವರೆಗೆ ರಭಸದ ಮಳೆಯಾಗಿದೆ.
ಬೆಳಗಾವಿ ಹಾಗೂ ಖಾನಾಪುರದಲ್ಲಿ ಶುಕ್ರವಾರ ಉತ್ತಮ ಮಳೆಯಾಗಿದೆ. ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲೂ ಬಿರುಸಿನ ಮಳೆ ಆಗಿದೆ.