ಮೈಸೂರು: ‘ಕೆಎಸ್ಒಯು ಮಾನ್ಯತೆಗೂ ಕೇಂದ್ರ ಸರ್ಕಾರಕ್ಕೂ ಸಂಬಂಧವಿಲ್ಲ’ ಎಂದು ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವಡೇಕರ್ ಅವರು ಪ್ರತಿಕ್ರಿಯಿಸಿರುವುದಕ್ಕೆ ಕೆಎಸ್ಒಯುನಲ್ಲಿ ಪದವಿ ಪಡೆದವರು ಟ್ವಿಟರ್ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ಸಂಬಂಧವಿಲ್ಲ ಎಂದರೆ ಅರ್ಥವೇನು? ಯುಜಿಸಿ ಯಾರ ಅಧೀನಕ್ಕೆ ಬರುತ್ತದೆ?’ ಎಂದು ಪ್ರಶ್ನಿಸಿದ್ದಾರೆ. ‘ಸಚಿವರು ಈ ಬಗ್ಗೆ ಮಾಹಿತಿಯೇ ಇಲ್ಲ ಎಂದು ಹೇಳಿರುವುದು ಸುಳ್ಳಿನ ಕಂತೆ’ ಎಂದು ಟೀಕಿಸಿದ್ದಾರೆ.
‘ನಿಮಗೆ ನಮ್ಮ ಸಮಸ್ಯೆ ಗೊತ್ತಿಲ್ಲದೆ ಇದ್ದರೆ ನಿಮ್ಮ ಭೇಟಿಗೆ ಅವಕಾಶ ಮಾಡಿಕೊಡಿ. ನೀವು ಹೇಳಿದ ಸಮಯಕ್ಕೆ, ನೀವು ಹೇಳುವ ಜಾಗದಲ್ಲಿ ಭೇಟಿಯಾಗಲು ನಾವು ಸಿದ್ಧರಿದ್ದೇವೆ’ ಎಂದು ಅವರು ಕೋರಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಕೆ.ರತ್ನಪ್ರಭಾ, ‘ಜಾವಡೇಕರ್ ಅವರಿಗೆ ವಿದ್ಯಾರ್ಥಿಗಳ ದುಃಖವನ್ನು ವಿವರಿಸಿದ್ದೇನೆ. ಅವರು ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸುವುದಾಗಿ ಭರವಸೆ ನೀಡಿದ್ದಾರೆ. ನಿಮ್ಮ ನೋವು ಅವರಿಗೆ ತಿಳಿದಿದೆ’ ಎಂದು ಸಾಂತ್ವನ ಹೇಳಿದ್ದಾರೆ.