ನವದೆಹಲಿ: ಚೇತೇಶ್ವರ್ ಪೂಜಾರ ನಾಯಕತ್ವದ ಸೌರಾಷ್ಟ್ರ ತಂಡವು ಮಂಗಳವಾರ ನಡೆಯಲಿರುವ ವಿಜಯ್ ಹಜಾರೆ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿಯ ಫೈನಲ್ನಲ್ಲಿ ಕರ್ನಾಟಕದ ಸವಾಲು ಎದುರಿಸಲಿದೆ.
ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ಭಾನುವಾರ ನಡೆದ ಸೆಮಿಫೈನಲ್ನಲ್ಲಿ ಸೌರಾಷ್ಟ್ರ ತಂಡವು 59 ರನ್ಗಳಿಂದ ಆಂಧ್ರಪ್ರದೇಶ ತಂಡದ ಎದುರು ಗೆದ್ದಿತು. ಆಲ್ರೌಂಡರ್ ರವೀಂದ್ರ ಜಡೇಜ (56; 51ಎಸೆತ) ಮತ್ತು ಅರ್ಪಿತ್ ವಾಸವದಾ (58; 59ಎ) ಅರ್ಧಶತಕ ಗಳಿಸಿದರು. ಶನಿವಾರ ನಡೆದಿದ್ದ ಮೊದಲ ಸೆಮಿಫೈನಲ್ನಲ್ಲಿ ಕರ್ನಾಟಕ ತಂಡವು ಮಹಾರಾಷ್ಟ್ರದ ವಿರುದ್ಧ ಜಯಿಸಿತ್ತು.
ಎರಡನೇ ಸೆಮಿಫೈನಲ್ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಸೌರಾಷ್ಟ್ರ ತಂಡವು 49.1 ಓವರ್ಗಳಲ್ಲಿ 255 ರನ್ ಗಳಿಸಿತು.ಪೂಜಾರ ಅವರು 53 ಎಸೆತಗಳಲ್ಲಿ 17 ರನ್ಗಳನ್ನು ಗಳಿಸಿದರು.
ಗುರಿ ಬೆನ್ನತ್ತಿದ ಆಂಧ್ರ ತಂಡವು 45.3 ಓವರ್ಗಳಲ್ಲಿ 196 ರನ್ ಗಳಿಸಿ ಆಲೌಟ್ ಆಯಿತು. ಸೌರಾಷ್ಟ್ರ ತಂಡದಲ್ಲಿರುವ ಇನ್ನೊಬ್ಬ ಎಡಗೈ ಸ್ಪಿನ್ನರ್ ಧರ್ಮೇಂದ್ರ ಜಡೇಜ (40ಕ್ಕೆ4) ಅವರು ಆಂಧ್ರ ಬ್ಯಾಟಿಂಗ್ ಬಲವನ್ನು ಕಟ್ಟಿ ಹಾಕಿದರು.
ರಿಕಿ ಭುಯ್ ಅವರು ರನ್ಔಟ್ ಆಗಿದ್ದು ಆಂಧ್ರ ತಂಡದ ಕುಸಿತಕ್ಕೆ ಕಾರಣವಾಯಿತು. ರವೀಂದ್ರ ಜಡೇಜ ಅವರು ಫೈನ್ ಲೆಗ್ನಿಂದ ಮಾಡಿದ ನೇರ ಥ್ರೋಗೆ ರಿಕಿ ರನ್ ಔಟ್ ಆಗಿ ನಿರ್ಗಮಿಸಿದರು.