ಶೆಟ್ಟಿಕೊಪ್ಪ(ಎನ್.ಆರ್.ಪುರ): ತಾಲ್ಲೂಕಿನ ಕಡಹಿನ ಬೈಲು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಒಂದು ವಾರದಿಂದ ಒಂಟಿ ಸಲಗ ಪ್ರತ್ಯಕ್ಷವಾಗಿದ್ದು, ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.
ತಾಲ್ಲೂಕಿನ ಕಡಹಿನಬೈಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜೇನುಕಟ್ಟೆಸರ, ಮಾಕೋಡು, ಚಣಮಣಿ, ಭೀಮನರಿ ಗ್ರಾಮದ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ಒಂಟಿ ಸಲಗ ಕಂಡು ಬಂದಿದ್ದು, ಮಂಗಳವಾರ ಜೇನುಕಟ್ಟೆಸರದ ಪೌಲೋಸ್ ಅವರ ಮನೆ ಸಮೀಪ ಒಂಟಿ ಸಲಗ ಬಂದಿತ್ತು.
‘ಗ್ರಾಮದ ವ್ಯಾಪ್ತಿಯ ಅಜ್ಜಿಗುಡ್ಡದ ವ್ಯಾಪ್ತಿಯ ಅರಣ್ಯಕ್ಕೆ ಬೆಂಕಿ ಬಿದ್ದುದರಿಂದ ಕಂಗಾಲಾಗಿರುವ ಆನೆಗಳು ಗ್ರಾಮದ ವ್ಯಾಪ್ತಿಯಲ್ಲಿನ ಕೆರೆಗೆ ನೀರು ಕುಡಿಯಲು ಬಂದು ಅಲ್ಲಿಯೇ ಬೀಡು ಬಿಟ್ಟಿವೆ. ಗ್ರಾಮಸ್ಥರು ಸೌದೆ, ಸೊಪ್ಪು ತರಲು ಸಾಧ್ಯವಾಗುತ್ತಿಲ್ಲ. ಅರಣ್ಯ ಇಲಾಖೆಯವರು ಕೂಡಲೇ ಗಮನಹರಿಸಿ ಒಂಟಿ ಸಲಗವನ್ನು ಕಾಡಿಗೆ ಅಟ್ಟಬೇಕೆಂದು’ ಗ್ರಾಮಸ್ಥರು ಆಗ್ರಹಿಸಿದ್ದಾರೆ.