ಹಿರಿಯೂರು: ದೇಶದಲ್ಲಿ ಪ್ರಥಮ ಬಾರಿಗೆ ಗ್ರಾಮವಾಸ್ತವ್ಯ ಕಾರ್ಯಕ್ರಮ ನಡೆಸುವ ಮೂಲಕ ಜನರ ಸಮಸ್ಯೆ ಅರಿತು, ಪರಿಹಾರ ನೀಡಲು ಆರಂಭಿಸಿದ್ದು ಎಚ್.ಡಿ. ಕುಮಾರಸ್ವಾಮಿ ಎಂದು ಹಿರಿಯೂರು ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಡಿ. ಯಶೋಧರ ಹೇಳಿದರು.
ತಾಲ್ಲೂಕಿನ ದಿಂಡಾವರ ಗ್ರಾಮದಲ್ಲಿ ಮಂಗಳವಾರ ಜೆಡಿಎಸ್ ಪಕ್ಷದ ವತಿಯಿಂದ ಹಮ್ಮಿಕೊಂಡಿದ್ದ ‘ಮನೆ ಮನೆಗೆ ಕುಮಾರಣ್ಣ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಕುಮಾರಣ್ಣ ಮುಖ್ಯಮಂತ್ರಿ ಆಗಿದ್ದ 20 ತಿಂಗಳ ಅವಧಿ ಸುವರ್ಣಾಕ್ಷರಗಳಲ್ಲಿ ಬರೆದಿಡು ವಂತಹದ್ದು. ಪ್ರಗತಿ ಪಥದತ್ತ ಕೊಂಡೊಯ್ಯುವ ದಿಟ್ಟಹೆಜ್ಜೆ ಇಟ್ಟ ಧೀಮಂತ ನಾಯಕ ಅವರು. ರೈತರ ಸಾಲ ಮನ್ನಾ ಮಾಡುವ ಮೂಲಕ ಅವರ ಕಣ್ಣೀರು ಒರೆಸಿದವರು. ದಲಿತರು, ಅಲ್ಪಸಂಖ್ಯಾತರು, ಮಹಿಳೆಯರು ಸೇರಿ ಎಲ್ಲ ವರ್ಗದವರ ಹಿತ ಕಾಪಾಡಲು ಶ್ರಮಿಸಿದವರು. ಈ ಬಾರಿ ಜೆಡಿಎಸ್ ಅಧಿಕಾರಕ್ಕೆ ಬಂದಲ್ಲಿ ಭದ್ರಾ ಮೇಲ್ದಂಡೆ ಯೋಜನೆಯನ್ನು ಶೀಘ್ರವಾಗಿ ಪೂರ್ಣ ಗೊಳಿಸುತ್ತೇವೆ. ರೈತರು, ವೃದ್ಧರು, ಮಹಿಳೆ ಯರು, ಬಡವರ ನೋವಿಗೆ ಸ್ಪಂದಿಸುತ್ತೇವೆ. ಒಮ್ಮೆ ನಮ್ಮ ಪಕ್ಷಕ್ಕೆ ಅವಕಾಶ ಕೊಡಿ’ ಎಂದು ಮನವಿ ಮಾಡಿದರು.
ಮುಖಂಡರಾದ ಬಿ.ಎಚ್. ಮಂಜುನಾಥ್, ಎಂ. ಜಯಣ್ಣ, ಶಿವಪ್ರಸಾದಗೌಡ, ಕೆ. ಮಂಜುನಾಥ್, ಶಂಕರಮೂರ್ತಿ, ಬಂಗಾರಪ್ಪ, ಪಾಂಡುರಂಗ, ಸೈಯದ್ ಸಲಾವುದ್ದೀನ, ಶ್ರೀನಿವಾಸ್
ಉಪಸ್ಥಿತರಿದ್ದರು.