ಹೊಸಪೇಟೆ:‘ಅಖಂಡ ಲಿಂಗಾಯತ ವೀರಶೈವ ಸಮಾಜವನ್ನು ಒಡೆದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಧರ್ಮಯುದ್ಧ ಸಾರುತ್ತೇವೆಂಬ ರಂಭಾಪುರಿ ಶ್ರೀಗಳ ಹೇಳಿಕೆಯು, ಕೇವಲ ಆವೇಶದಲ್ಲಿ ನೀಡಿರುವಂಥದ್ದು’ ಎಂದು ಕೊಟ್ಟೂರು ಸಂಸ್ಥಾನ ಮಠದ ಸಂಗನಬಸವ ಸ್ವಾಮೀಜಿ ಬುಧವಾರ ಇಲ್ಲಿ ಅಭಿಪ್ರಾಯಪಟ್ಟರು.
‘ಸ್ವಾಮೀಜಿ ಆ ಕ್ಷಣಕ್ಕೆ ಹಾಗೆ ಪ್ರತಿಕ್ರಿಯಿಸಿದ್ದಾರೆ. ಚುನಾವಣೆಯಲ್ಲಿ ಯಾರನ್ನು ಆಯ್ಕೆ ಮಾಡಬೇಕು? ಯಾರನ್ನು ಮಾಡಬಾರದು ಎಂಬ ಅಂತಿಮ ತೀರ್ಮಾನ ಜನರದು’ ಎಂದು ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದರು.
‘ಪ್ರತ್ಯೇಕ ಧರ್ಮದ ಕುರಿತು ಸರ್ಕಾರ ಏನು ನಿರ್ಧಾರ ಕೈಗೊಂಡಿದೆ ಎನ್ನುವುದು ಆರಂಭದಲ್ಲಿ ಯಾರಿಗೂ ಸ್ಪಷ್ಟವಾಗಿ ಅರ್ಥವಾಗಿರಲಿಲ್ಲ. ಹಾಗಾಗಿ ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಸೇರಿದಂತೆ ಕೆಲವರು ಅದನ್ನು ಸ್ವಾಗತಿಸಿದ್ದರು. ಅದನ್ನು ಸರಿಯಾಗಿ ತಿಳಿದುಕೊಂಡ ನಂತರ ಈಗ ವಿರೋಧಿಸುತ್ತಿದ್ದಾರೆ. ಸರ್ಕಾರ ಕೂಡ ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಮಾಡಿದೆ’ ಎಂದರು.
‘ಸಮಾಜದಲ್ಲಿ ಸಾಮರಸ್ಯ ಮೂಡಿಸಲು ಇದೇ 23ರಂದು ಸರ್ವಧರ್ಮ ಸಮನ್ವಯ ರಥೋತ್ಸವ ಹಮ್ಮಿಕೊಳ್ಳಲಾಗಿದ್ದು, ಎಲ್ಲ ಧರ್ಮಗ್ರಂಥಗಳನ್ನು ತೇರಿನಲ್ಲಿ ಇಡಲಾಗುವುದು’ ಎಂದು ಹೇಳಿದರು.